ಚಿಕ್ಕಮಗಳೂರು: ಸಹಾಯ ಕೇಳಿದ ಸಂತ್ರಸ್ತರ ಮೇಲೆ ದರ್ಪ ಮೆರೆದಿರುವ ಆರೋಪವೊಂದು ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಕೇಳಿ ಬಂದಿದೆ.
ಮಲೆನಾಡಿನಲ್ಲಿ ಸುರಿಯುತ್ತಿರುವ ಮಹಾ ಮಳೆ ಭಾರೀ ಅವಾಂತರವನ್ನು ಸೃಷ್ಟಿಸಿದೆ. ಈ ನಡುವೆ ಸಹಾಯ ಕೇಳಿದ ಪ್ರವಾಹ ಸಂತ್ರಸ್ತರ ಹರಿಹಾಯ್ದಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಮುದುಗುಂಡಿ ಗ್ರಾಮ ಮಳೆಗೆ ಜಲಾವೃತಗೊಂಡಿದೆ. ಹೀಗಾಗಿ ಅಲ್ಲಿನ ಗ್ರಾಮಸ್ಥರು ತಮ್ಮ ಸಹಾಯಕ್ಕೆ ಬನ್ನಿ ಎಂದಿದ್ದಕ್ಕೆ ಶಾಸಕ ಗರಂ ಆಗಿದ್ದಾರೆ.
ಮದುಗುಂಡಿಯ ಯುವಕನೊಬ್ಬ ಪ್ರವಾಹಕ್ಕೆ ಮನೆ ಕೊಚ್ಚಿ ಹೋಗಿದೆ, ಸಹಾಯ ಮಾಡಿ ಎಂದು ಶಾಸಕರಿಗೆ ಕರೆ ಮಾಡಿದ್ದನು. ಈ ವೇಳೆ ಸಿಟ್ಟಿಗೆದ್ದ ಶಾಸಕರು ಅವಾಚ್ಯ ಶಬ್ದಗಳಿಂದ ಯುವಕನಿಗೆ ನಿಂದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮದುಗುಂಡಿಯಲ್ಲಿ ಮಳೆಗೆ ಇಪ್ಪತ್ತಕ್ಕೂ ಹೆಚ್ಚು ಮನೆಗಳು ಕೊಚ್ಚಿಹೋಗಿದ್ದು, ಜನರು ನಿರಾಶ್ರಿತರಾಗಿದ್ದಾರೆ. ಮರಸೂಣಿಗೆ ಹೊಳೆ ಅಬ್ಬರ ಹಾಗೂ ಗುಡ್ಡ ಕುಸಿತದಿಂದ ಜನರು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಹೀಗಾಗಿ ಜನರು ಕರೆ ಮಾಡಿ ಶಾಸಕರೇ ಸಹಾಯ ಮಾಡಿ ಅಂದಿದ್ದಕ್ಕೆ, ಡಿಸಿ, ಎಸ್ಪಿನೇ ಬರೋಕಾಗ್ತಿಲ್ಲ ನಾನೇನು ಮಾಡಲಿ ಎಂದು ನೆಪ ಹೇಳಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.