– ತುಬಚಿ ಬಬಲೇಶ್ವರ ಯೋಜನೆ ನನ್ನ ಕೂಸು
– ನಮ್ಮ ಯೋಜನೆಯನ್ನು ಅವರದ್ದೆಂದು ಸಿಎಂ ಸುಳ್ಳು ಹೇಳ್ತಿದ್ದಾರೆ
– ಜತ್ ಭಾಗದಲ್ಲಿ ಯಡಿಯೂರಪ್ಪನವರದ್ದು ಏನೂ ನಡೆಯುವುದಿಲ್ಲ
ವಿಜಯಪುರ: ತುಬಚಿ ಬಬಲೇಶ್ವರ ಯೋಜನೆ ನನ್ನ ಕೂಸು, ನಮ್ಮ ಸರ್ಕಾರವಿದ್ದಾಗ ಆ ಯೋಜನೆ ರೂಪಿಸಿ ಟೆಂಡರ್ ಕರೆದು ಮುಗಿಸಿದ್ದೇವೆ. ಮಹಾರಾಷ್ಟ್ರದ ಕೆಲವು ಗ್ರಾಮಗಳಿಗೆ ಕುಡಿಯಲು ನೀರು ಬಿಟ್ಟಿದ್ದೇವೆ. ಆದರೆ ಈಗ ತಾವು ನೀರು ಬಿಟ್ಟಿರುವುದಾಗಿ ಸಿಎಂ ಸುಳ್ಳು ಹೇಳುತ್ತಿದ್ದಾರೆ. ಜತ್ ಭಾಗಕ್ಕೆ ಯಾರು ನೀರು ಬಿಟ್ಟಿದ್ದು ಎಂದು ಅಲ್ಲಿನ ಪ್ರಾಣಿ ಪಕ್ಷಿಗಳಿಗೂ ಗೊತ್ತಿದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಸಿಎಂಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸಿಎಂ ಬಿಎಸ್ವೈ ವಿರುದ್ಧ ‘ಕತ್ತಿ’ ಇರಿತ
ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಅವರು, ತುಬಚಿ ಬಬಲೇಶ್ವರ ಯೋಜನೆ ನನ್ನ ಕೂಸು. ನಾನು ಮಾಡಿದ ರೂ. 3,600 ಕೋಟಿ ರೂ. ವೆಚ್ಚದ ಯೋಜನೆ. ಇದು 1.35 ಲಕ್ಷ ಎಕ್ರೆಗೆ ನೀರಾವರಿ ಕಲ್ಪಿಸುವ ಯೋಜನೆ. ಈ ಯೋಜನೆಯನ್ನು ನಾವೇ ರೂಪಿಸಿ, ಟೆಂಡರ್ ಕರೆದು ಮುಗಿಸಿದ್ದೇವೆ. ಮುಂದಿನ ಒಂದೂವರೆ ವರ್ಷದಲ್ಲಿ ನಿಗದಿತ ಜಮೀನಿಗೆ ನೀರಾವರಿ ಸೌಲಭ್ಯ ಸಿಗುತ್ತದೆ. ಹಾಲಿ ಯೋಜನೆಯಲ್ಲಿ ನೀರು ಹಂಚಿಕೆ ಸಾಧ್ಯವಿಲ್ಲ. ಹೀಗಾಗಿ ಸಿಎಂ, ಡಿಸಿಎಂ ಇದನ್ನು ಅರ್ಥೈಸಿಕೊಳ್ಳಲಿ. ಈಗ ನೀರು ನೀಡಬೇಕಾದರೆ ಮತ್ತೊಂದು ಜಾಕ್ವೆಲ್ ಆರಂಭಿಸಬೇಕು. ಇಲ್ಲದಿದ್ದರೆ ಮಹಾರಾಷ್ಟ್ರಕ್ಕಾಗಿಯೇ ಜಲಸಂಗ್ರಹಾಲಯ ನಿರ್ಮಿಸಬೇಕು. ಮಾನವೀಯತೆ ದೃಷ್ಟಿಯಲ್ಲಿ ನೀರು ಕೊಡುವಾಗ ರಾಜ್ಯದ ಹಿತವನ್ನೂ ಕಾಪಾಡಬೇಕು. ಇದರ ಬಗ್ಗೆ ಮಾಹಿತಿ ಇರದ ಸಿಎಂ ಯಾರೋ ಬರೆದುಕೊಟ್ಟ ಭಾಷಣ ಓದಿದ್ದಾರೆ. ಮಹಾರಾಷ್ಟ್ರಕ್ಕೆ ಕೊಟ್ಟಲಗಿ ಕೆರೆಯಿಂದ ನೀರು ಕೊಡಲು ರೈತರೊಬ್ಬರು ಅಡ್ಡಿ ಪಡಿಸಿದ್ದಾರೆ. ಆ ರೈತನನ್ನು ನಾನು ಮನವೊಲಿಸುತ್ತೇನೆ. ಈಗ ಚುನಾವಣೆ ಸಂದರ್ಭದಲ್ಲಿ ಸಿಎಂ ಈ ರೀತಿ ಹೇಳಿಕೆ ನೀಡಿದ್ದು ಯಾಕೆ ಎಂದು ಪ್ರಶ್ನಿಸಿ ಕಿಡಿಕಾರಿದರು. ಇದನ್ನೂ ಓದಿ:ಮಹಾರಾಷ್ಟ್ರಕ್ಕೆ ನೀರು ಬಿಡುವ ಬಗ್ಗೆ ಸಿಎಂ ಪರ ಯತ್ನಾಳ್ ಬ್ಯಾಟಿಂಗ್
ಈಗಾಗಲೇ ಮಹಾರಾಷ್ಟ್ರದ ತಿಕ್ಕುಂಡಿ, ಧರಿ ಬಡಚಿ, ಉಮರಾಣಿ ಕೆರೆಗಳಿಗೆ ಕುಡಿಯಲು ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರು ಬಿಟ್ಟಿದ್ದೇನೆ. ಆದರೆ, ಈಗ ತಾವು ನೀರು ಬಿಟ್ಟಿರುವುದಾಗಿ ಸಿಎಂ ಸುಳ್ಳು ಹೇಳುತ್ತಿದ್ದಾರೆ. ಮಹಾರಾಷ್ಟ್ರದ ಜತ್ ಭಾಗದಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ಆ ಜನರಿಗೆ ನೀರು ಕೊಡುವುದರಲ್ಲಿ ತಪ್ಪಿಲ್ಲ. ಆದರೆ, ನೀರು ಬಿಡಲು ಹೊಸ ಯೋಜನೆ ರೂಪಿಸಬೇಕು. ಆ ಯೋಜನೆಗಳಿಗೆ ತಗಲುವ ವೆಚ್ಚವನ್ನು ಮಹಾರಾಷ್ಟ್ರ ಸರ್ಕಾರ ಭರಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ:ಮಹಾರಾಷ್ಟ್ರಕ್ಕೆ ಕರ್ನಾಟಕದ ನೀರು – ಸಿಎಂ ಬಿಎಸ್ವೈ ಸ್ಪಷ್ಟನೆ
ಜತ್ ಭಾಗದಲ್ಲಿ ಯಡಿಯೂರಪ್ಪನವರದ್ದು ಏನೂ ನಡೆಯುವುದಿಲ್ಲ. ಆ ಭಾಗದ ಜನರು ಬಿಡಿ, ಪ್ರಾಣಿ ಪಕ್ಷಿಗಳಿಗೂ ಯಾರು ನೀರು ಬಿಟ್ಟಿದ್ದು ಎಂಬುದು ಗೊತ್ತಿದೆ. ಆ ಭಾಗಕ್ಕೆ ಶಾಶ್ವತ ಯೋಜನೆ ರೂಪಿಸಬೇಕು. ಸಿಎಂ ತಮ್ಮ ಬದ್ಧತೆಯನ್ನು ಚುನಾವಣೆಗೆ ಮಾತ್ರ ಸೀಮಿತ ಮಾಡುವುದು ಬೇಡ. ಚುನಾವಣೆ ಬಳಿಕವು ಮಹಾರಾಷ್ಟ್ರದ 42 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಿ. ಮಹಾದಾಯಿ ಬಗ್ಗೆ ಕಾಳಜಿ ಇದ್ದರೆ ಶಾಸಕ ಬಸನಗೌಡ ಯತ್ನಾಳ್ ಪಾಟೀಲ್ ನೇತೃತ್ವ ವಹಿಸಿ ಸಮಸ್ಯೆ ಬಗೆಹರಿಸಲಿ ಎಂದು ಸವಾಲ್ ಹಾಕಿದರು.