ರಾಮನಗರ: ಮದುವೆಗೆ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಮನನೊಂದ ಪ್ರೇಮಿಗಳು ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ರಾಮನಗರದ ರಾಮದೇವರ ಬೆಟ್ಟದಲ್ಲಿ ನಡೆದಿದೆ.
ಬೆಂಗಳೂರಿನ ಶ್ರೀನಗರದ ಐಶ್ವರ್ಯ ಹಾಗೂ ಅವಲಹಳ್ಳಿಯ ರಾಕೇಶ್ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು. ಒಂದೂವರೆ ವರ್ಷದಿಂದ ಐಶ್ವರ್ಯ ಹಾಗೂ ರಾಕೇಶ್ ಪ್ರೀತಿಸುತ್ತಿದ್ದರು. ಇಬರಿಬ್ಬರು ಪ್ರೀತಿಸುತ್ತಿದ್ದ ವಿಚಾರ ಇವರ ಮನೆಯವರಿಗೆ ತಿಳಿದು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪೋಷಕರು ನಿರಾಕರಿಸಿದ್ದಕ್ಕೆ ಮನನೊಂದ ಪ್ರೇಮಿಗಳು ಬುಧವಾರ ಬೆಟ್ಟಕ್ಕೆ ಬಂದು ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಅದೃಷ್ಟವಶಾತ್ ಕೆಳಭಾಗದಲ್ಲಿ ಮರಗಳಿದ್ರಿಂದ ಮರದ ಕೊಂಬೆಗಳ ಮೇಲೆ ಬಿದ್ದು ನೆಲಕ್ಕೆ ಬಿದ್ದಿದ್ದಾರೆ. ಘಟನೆಯಲ್ಲಿ ರಾಕೇಶ್ ಗೆ ಕಾಲು ಮುರಿದಿದ್ರೆ, ಐಶ್ವರ್ಯ ಗೆ ಕಾಲು ಮುರಿದು ತಲೆಗೂ ಪೆಟ್ಟಾಗಿದೆ.
ಈ ಘಟನೆ ನಡೆದ ವೇಳೆ ಸ್ಥಳದಲ್ಲಿದ್ದ ಪ್ರವಾಸಿಗರು ಹಾಗೂ ಸ್ಥಳೀಯರು ಇಬ್ಬರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.