ತುಮಕೂರು: ಗುಜರಾತ್ ನಲ್ಲಿ ರಾಹುಲ್ ಗಾಂಧಿ ನಾಯಕತ್ವಕ್ಕೆ ಪ್ರೋತ್ಸಾಹ ಸಿಕ್ಕಿದೆ ಎಂದು ತುಮಕೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದರು.
ಗುಜರಾತ್ ನಲ್ಲಿ ರಾಹುಲ್ ಗಾಂಧಿ ನಾಯಕತ್ವಕ್ಕೆ ಪ್ರೋತ್ಸಾಹ ಸಿಕ್ಕಿದೆ ಹಾಗೂ ಅವರಿಗೂ ಕೂಡಾ ವಿಶ್ವಾಸ ಹೆಚ್ಚಿದೆ. ಎರಡೂ ಕ್ಷೇತ್ರದಲ್ಲಿ ಅಧಿಕಾರ ಹಿಡಿಯುವ ನಿರೀಕ್ಷೆ ಇನ್ನೂ ಇದೆ ಎಂದು ಪರಮೇಶ್ವರ್ ತಿಳಿಸಿದರು.
ರಾಹುಲ್ ಗಾಂಧಿ ಪ್ರಚಾರ ಮಾಡಿದ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಹೆಚ್ಚಿದೆ ಎನ್ನುವುದು ಸುಳ್ಳು. ಹಿಮಾಚಲದಲ್ಲಿ ಕಳೆದ 15 ವರ್ಷ ಗಳಿಂದ ನಮ್ಮ ಸರ್ಕಾರ ಇತ್ತು. ಹಾಗಾಗಿ ಸ್ವಾಭಾವಿಕವಾಗಿ ವಿರೋಧಿ ಅಲೆ ಬಂದಿರಬಹುದೇನೋ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದರು.
ಇವಿಎಂನಲ್ಲಿ ಈಗಲೂ ಸಂಪೂರ್ಣ ನಂಬಿಕೆ ಇಲ್ಲ. ಇವಿಎಂ ಹೈಜಾಕ್ ಮಾಡಬಹುದು ಎಂದು ಅಮೆರಿಕದ ವಿಶ್ವವಿದ್ಯಾಲಯ ಹೇಳಿದೆ. ಕರ್ನಾಟಕದಲ್ಲಿ ಬ್ಯಾಲೆಟ್ ಪೇಪರ್ ತರುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ಜಿ.ಪರಮೇಶ್ವರ್ ಹೇಳಿದರು.