ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ (Om Birla) ಮಂಗಳವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ತರಾಟೆಗೆ ತೆಗೆದುಕೊಂಡರು.
ಇಂದು ಸಂಸತ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಾಷ್ಟ್ರಪತಿಗಳಿಗೆ ವಂದನಾ ನಿರ್ಣಯದ ಮೇಲೆ ಮಾತನಾಡಿದರು. ಪ್ರದಾನಿಯವರು ಭಾಷಣ ಪ್ರಾರಂಭ ಮಾಡುತ್ತಿದ್ದಂತೆಯೇ ವಿಪಕ್ಷ ನಾಯಕರು ಸಿಡಿದೆದ್ದರು. ಅಲ್ಲದೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವಂತೆ ರಾಹುಲ್ ಗಾಂಧಿಯವರು ತಮ್ಮ ನಾಯಕರಿಗೆ ಸೂಚಿಸಿದ್ದಾರೆ. ಈ ಮೂಲಕ ಪ್ರಧಾನಿ ಭಾಷಣಕ್ಕೆ ತಡೆಯೊಡ್ಡಲು ಮುಂದಾದರು.
ಈ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು, ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರು. ಸದನದಲ್ಲಿ ಮಾತನಾಡಲು ಸಾಕಷ್ಟು ಅವಕಾಶ ಮತ್ತು ಸಮಯವನ್ನು ನೀಡಲಾಗಿದೆ ಎಂದು ಹೇಳಿದರು. ಅಲ್ಲದೇ ಸಂಸತ್ತಿನ ಘನತೆಯನ್ನು ಕಾಪಾಡಿಕೊಳ್ಳುವಂತೆ ರಾಗಾಗೆ ಸ್ಪೀಕರ್ ತಿಳಿಸಿದರು. ಇದನ್ನೂ ಓದಿ: ಚುನಾವಣೆಯಲ್ಲಿ 3ನೇ ಬಾರಿಯೂ ಸೋತಿದ್ದಕ್ಕೆ ಕೆಲವರಿಗೆ ನೋವಾಗಿದೆ: ವಿಪಕ್ಷಗಳಿಗೆ ಮೋದಿ ತಿರುಗೇಟು
ಸ್ಪೀಕರ್ ಹೇಳಿದ್ದೇನು..?: ಆತ್ಮೀಯ ವಿರೋಧ ಪಕ್ಷದ ನಾಯಕರೇ, ಇದು ನಿಮಗೆ ಸರಿಹೊಂದುವುದಿಲ್ಲ. ನಿಮಗೆ ಸಾಕಷ್ಟು ಅವಕಾಶಗಳು ಮತ್ತು ಸಮಯವನ್ನು ನೀಡಲಾಗಿದೆ. ಸಭಾನಾಯಕರು ಮಾತನಾಡುವಾಗ ಸದನದಲ್ಲಿ ನಿರ್ದೇಶನ ನೀಡುತ್ತಿರುವುದು ನಿಮಗೆ ಶೋಭೆ ತರಲ್ಲ. ಸಂಸತ್ತಿನ ಸಂಪ್ರದಾಯಗಳ ಪ್ರಕಾರ ಇದು ಸೂಕ್ತವಲ್ಲ. ಸಂಸತ್ತಿನ ಘನತೆ ಕಾಪಾಡಿ. ಸದಸ್ಯರನ್ನು ಸದನದ ಬಾವಿಗೆ ಬರುವಂತೆ ನಿರ್ದೇಶಿಸುತ್ತಿದ್ದೀರಾ? ಇದಕ್ಕಾಗಿ ನೀವು ವಿರೋಧ ಪಕ್ಷದ ನಾಯಕರಾಗಿದ್ದೀರೇ? ಬಿರ್ಲಾ ಅವರು ರಾಹುಲ್ ಗಾಂಧಿಗೆ ಛೀಮಾರಿ ಹಾಕಿದರು.