ಬೆಳಗಾವಿ (ಚಿಕ್ಕೋಡಿ): ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಕಂದಾಯ ಇಲಾಖೆಯ ಗ್ರಾಮ ಸಹಾಯಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದ ಸುರೇಶ್ ಭೀಮಪ್ಪ ಸನದಿ(28) ಮೃತ ದುರ್ದೈವಿ. ಸುರೇಶ್ ಅವರನ್ನು ಹುಕ್ಕೇರಿ ತಾಲೂಕಿನ ಕಣವಿಕಟ್ಟಿ ಗ್ರಾಮದ ಬೂತ್ ನಂ. 99 ರಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಎದೆ ನೋವು ಕಾಣಿಕೊಂಡು ಕೆಳಗೆ ಬಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸುರೇಶ್ ಅವರು ಪಾಶ್ಚಾಪುರ ಕಂದಾಯ ಇಲಾಖೆಯ ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಏಪ್ರಿಲ್ 26 ರಂದು ಸುರೇಶ್ ಮದುವೆ ನಿಶ್ಚಯವಾಗಿತ್ತು. ಸುರೇಶ್ ಮೃತ ದೇಹವನ್ನು ಹುಕ್ಕೇರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಕಲಬುರಗಿ ಜಿಲ್ಲೆಯ ಸುರಪುರದ ಎಸ್.ಪಿ ಕಾಲೇಜು ಮೈದಾನದಲ್ಲಿ ನಿನ್ನೆಯಷ್ಟೇ ಮತಯಂತ್ರಗಳ ಮಾಸ್ಟರಿಂಗ್ ವೇಳೆ ಶಿಕ್ಷಕ ಶಿವಪುತ್ರ (50) ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಶಿವಪುತ್ರ ಅವರು ಶಹಪುರ ತಾಲೂಕಿನ ಹಳೇಸಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು.
ಬಳ್ಳಾರಿ ಸಿರಗುಪ್ಪದಲ್ಲಿ ಚುನಾವಣಾ ತರಬೇತಿ ವೇಳೆ (ಏಪ್ರಿಲ್ 11ರಂದು) ಕೆಕ್ಕಲಕೋಟೆ ಗ್ರಾಮದ ಶಿಕ್ಷಕ ಬಿ.ರಮೇಶ್ (46) ಸಾವನ್ನಪ್ಪಿದ್ದರು. ಬಿ.ರಮೇಶ್ ಅವರು ಸಿರಗುಪ್ಪದ ಆರನೇ ವಾರ್ಡಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರು. ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಪೂಲಿಂಗ್ ಆಫೀಸರ್ ಆಗಿ ನೇಮಕವಾಗಿದ್ದರು.