ಮೈಸೂರು: ದೋಸ್ತಿ ಅಭ್ಯರ್ಥಿ ವಿಜಯ್ಶಂಕರ್ ಅವರಿಗೆ ಬೆಂಬಲ ನೀಡುವ ಸಲುವಾಗಿ ಕರೆಯಲಾದ ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿ ಗಲಾಟೆ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಸಲುವಾಗಿ ಇಂದು ಜೆಡಿಎಸ್ ಸಭೆಯನ್ನು ಆಯೋಜಿಸಿತ್ತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೆಗೌಡ ಮಾತನಾಡುತ್ತಿದ್ದಾಗ ಕೆಲ ಕಾರ್ಯಕರ್ತರು ಏಕಾಏಕಿ ಗಲಾಟೆಗೆ ಮುಂದಾದರು. ಇದನ್ನು ಓದಿ: ಮೈಸೂರು-ಕೊಡಗು ಮೈತ್ರಿ ಅಭ್ಯರ್ಥಿಗೆ ಸೋಲಾದ್ರೆ ನಾನು, ಸಾ.ರಾ.ಮಹೇಶ್ ಹೊಣೆಯಾಗಲ್ಲ: ಜಿ.ಟಿ.ದೇವೇಗೌಡ
“ನೀವು ಈಗ ಮೈತ್ರಿ ಅಂತ ಹೇಳುತ್ತಿದ್ದೀರಿ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಾಗಿವೆ. ಅದನ್ನು ಮರೆತು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡರೆ ಹೇಗೆ ಎಂದು ಕಾರ್ಯಕರ್ತರು, ನಾಯಕರನ್ನು ಪ್ರಶ್ನಿಸಿ ಅಸಮಾಧಾನ ಹೊರ ಹಾಕಿದರು.
ಸಭೆಯಲ್ಲಿ ಕೆಲ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ, ಪ್ರಧಾನಿ ನರೇಂದ್ರ ಮೋದಿಗೆ ಜೈ ಎಂದು ಕೂಗಿದರು. ಅಷ್ಟೇ ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಬಳಿ ಬಂದು ಮತ ಕೇಳಲಿ, ಆಮೇಲೆ ನೋಡುತ್ತೇವೆ ಎಂದು ಕಿಡಿಕಾರಿದರು.
ಗಲಾಟೆ ಹೆಚ್ಚಾಗುತ್ತಿದ್ದಂತೆ ಸಚಿವ ಜಿ.ಟಿ.ದೇವೇಗೌಡ ಅವರು ಎದ್ದು ನಿಂತು ಕಾರ್ಯಕರ್ತರಿಗೆ ಕೈ ಮುಗಿದರು. ಆದರೂ ಸಭೆಯಲ್ಲಿ ಕಾರ್ಯಕರ್ತರು ಮೈತ್ರಿಯನ್ನು ವಿರೋಧಿಸಿದರು. ಈ ವೇಳೆ ಸಚಿವರು ವೇದಿಕೆ ಬಿಟ್ಟು ಕೆಳಗಿಳಿದು, ಕಾರ್ಯಕರ್ತರ ಬಳಿಗೆ ಹೋಗಿ ಸಮಾಧಾನಪಡಿಸಲು ಯತ್ನಿಸಿದರು. ಆದರೆ ಸಚಿವರ ಮಾತಿಗೂ ಕಾರ್ಯಕರ್ತರು ಕ್ಯಾರೆ ಎನ್ನಲಿಲ್ಲ.
ಹಾಸನದಲ್ಲೂ ಭಿನ್ನಮತ: ಚನ್ನರಾಯಪಟ್ಟಣ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಗುರುವಾರ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಭಾಷಣ ಆರಂಭಿಸುತ್ತಿದ್ದಂತೆ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದರು. ನಾವು ಜೆಡಿಎಸ್ಗೆ ಮತ ಹಾಕಲ್ಲ. ಬಿಜೆಪಿ ಹಾಕುತ್ತೇವೆ ಎಂದು ಘೋಷಣೆ ಕೂಗಿದರು. ಈ ವೇಳೆ “ಮೋದಿ, ಮೋದಿ” ಎಂದು ಜೈಕಾರ ಹಾಕಿದ್ದರು. ಮುಖಂಡರು-ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಪರಸ್ಪರ ತಳ್ಳಾಟವೂ ನಡೆಯಿತು. ಕುರ್ಚಿಗಳನ್ನು ಎಸೆದು ಆಕ್ರೋಶ ಹೊರ ಹಾಕಿದ್ದರು.