– ಶಾಸಕ ಗಣೇಶಗೆ ಶೀಘ್ರವೇ ಜಾಮೀನು ಕೊಡಿಸಿ
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ವಿ.ಎಸ್.ಉಗ್ರಪ್ಪ ಅವರನ್ನು ಪಕ್ಷದ ಕಾರ್ಯಕರ್ತರೇ ತರಾಟೆ ತೆಗೆದುಕೊಂಡ ಪ್ರಸಂಗ ಜಿಲ್ಲೆಯ ಕಂಪ್ಲಿಯಲ್ಲಿ ನಡೆದಿದೆ.
ವಿ.ಎಸ್.ಉಗ್ರಪ್ಪ ಅವರು ಇಂದು ಕಂಪ್ಲಿಯಲ್ಲಿ ಸಮಾವೇಶ ಹಾಗೂ ಪ್ರಚಾರ ನಡೆಸಿದರು. ಈ ವೇಳೆ ಕೆಲವರು ಶಾಸಕ ಗಣೇಶ ಅವರಿಗೆ ಶೀಘ್ರವೇ ಜಾಮೀನು ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ನಿಮಗ್ಯಾಕೆ ನಾವು ಬೆಂಬಲ ಕೊಡಬೇಕು. ನಮ್ಮ ಶಾಸಕ ಗಣೇಶ್ ಅವರನ್ನು ಕರೆದುಕೊಂಡು ಬನ್ನಿ. ನಂತರ ನಾವು ನಿಮಗೆ ಬೆಂಬಲ ಕೊಡುತ್ತೇವೆ ಎಂದು ಕಿಡಿಕಾರಿದರು.
ಈ ವೇಳೆ ಮಾತನಾಡಿ ಸಂಸದರು, ಶಾಸಕ ಗಣೇಶ್ ಪಿಎ ಹಾಗೂ ಈ ಭಾಗದ ಜನರು ಸಲ್ಲಿಸಿದ ಮನವಿಯನ್ನು ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ. ಒಬ್ಬ ಮನುಷ್ಯ, ಸ್ನೇಹಿತನಾಗಿ ನಮ್ಮವರನ್ನು ರಕ್ಷಿಸುವಲ್ಲಿ ಪ್ರಯತ್ನಿಸುತ್ತಿದ್ದೇನೆ. ರಾಮನಗರದ ಈಗಲ್ಟನ್ ರೆಸಾರ್ಟಿನಲ್ಲಿ ಘಟನೆ ನಡೆಯಬಾರದಿತ್ತು. ಶಾಸಕರಾದ ಆನಂದ್ ಸಿಂಗ್ ಹಾಗೂ ಕಂಪ್ಲಿಯ ಗಣೇಶ್ ಅವರ ಮಧ್ಯೆ ಉತ್ತಮ ಸಂಬಂಧವಿತ್ತು. ಆದರೆ ಈಗ ಅದು ಹಾಳಾಗಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಆನಂದ್ ಸಿಂಗ್ ಅವರ ಮನವೊಲಿಕೆಗೆ ಬಹಳ ಸಮಯ ಬೇಕಾಯಿತು. ಹೀಗಾಗಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಶಾಸಕರನ್ನು ಆದಷ್ಟು ಬೇಗ ಜಾಮೀನಿನ ಆಧಾರದ ಹೊರ ತರಲಾಗುತ್ತದೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ಏನಿದು ಪ್ರಕರಣ?:
ಈಗಲ್ ಟನ್ ರೆಸಾರ್ಟಿನಲ್ಲಿ ಜನವರಿ 19ರ ರಂದು ರಾತ್ರಿ ಕಂಪ್ಲಿ ಶಾಸಕ ಗಣೇಶ್ ಹಾಗೂ ಶಾಸಕ ಆನಂದ್ ಸಿಂಗ್ ಪರಸ್ಪರ ಜಗಳ ಮಾಡಿಕೊಂಡಿದ್ದರು. ಈ ವೇಳೆ ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಶಾಸಕ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿತ್ತು.