ಬೆಂಗಳೂರು: ಪೊಲೀಸ್ ಬೈಕ್ ಸುಟ್ಟ ಎಂಬ ಕಾರಣಕ್ಕೆ ಪೊಲೀಸರು ಲಾಕಪ್ ಡೆತ್ ನಡೆಸಿದ್ದ ಪ್ರಕರಣದ ಸತ್ಯಾಂಶ ಮೂರು ವರ್ಷಗಳ ಬಳಿಕ ಬಯಲಾಗಿದೆ. ನಗರದ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ವರ್ಷಗಳ ಹಿಂದೆ ಲಾಕಪ್ ಡೆತ್ ನಡೆದಿತ್ತು.
ಪೊಲೀಸರು ಆರೋಪಿ ರೈತ ದೇವರಾಜು ಸಹಜವಾಗಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದರು. ಆದ್ರೆ ಪ್ರಕರಣವನ್ನು ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ರೈತ ದೇವರಾಜುನನ್ನು ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿ ಹೊಡೆದು ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ಸಿಐಡಿಗೆ ವರ್ಗಾಯಿಸಲಾಗಿತ್ತು.
ಅರೆಸ್ಟ್ ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸರು ದೇವರಾಜನನ್ನು ಬಂಧಿಸಲು ಹೋಗಿದ್ದರು. ಈ ವೇಳೆ ಕೋಪಗೊಂಡ ದೇವರಾಜು ಪೊಲೀಸರ ಬೈಕಿಗೆ ಬೆಂಕಿ ಹಚ್ಚಿದ್ದನು. ದೇವರಾಜು ಮೇಲೆ ಕೋಪಗೊಂಡ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ಸಬ್ ಇನ್ಸ್ ಪೆಕ್ಟರ್ ಲೋಕೇಶ್, ಪಿಸಿಗಳಾದ ಸತೀಶ್, ಆನಂದ್ ಸೇರಿದಂತೆ 9 ಜನ ಹಲ್ಲೆ ಮಾಡಿದ್ದರು. ಮೈಸೂರಿನ ಕೆ ಆರ್ ಆಸ್ಪತ್ರೆಗೆ ದೇವರಾಜುನನ್ನು ಕರೆದ್ಯೊಯ್ಯುವ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದನು.
ಇಷ್ಟೆಲ್ಲ ಆದ್ರೂ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ನಕಲಿ ವೈದ್ಯ ಪ್ರಮಾಣ ಪತ್ರವನ್ನು ತಯಾರಿಸಿದ್ದನು. ಸಹಜ ಸಾವು ಎಂಬ ವೈದ್ಯಕೀಯ ಪ್ರಮಾಣ ನೋಡಿದ್ದ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಸದ್ಯ ಇದೀಗ ಎಲ್ಲ ಸತ್ಯಾಂಶ ಬಯಲಾಗಿದ್ದು, 9 ಜನ ಪೊಲೀಸ್ರ ಮೇಲೆ ಬಂಧನದ ತೂಗುಗತ್ತಿ ತೂಗುತ್ತಿದೆ. ಇನ್ನೆರಡು ದಿನಗಳಲ್ಲಿ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿ ಬಂಧಿಸೋ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv