– ರಕ್ಷಣೆಗಾಗಿ ಜಿಲ್ಲಾಧಿಕಾರಿಗೆ ಮನವಿ
ಧಾರವಾಡ: ನೈರುತ್ಯ ರೇಲ್ವೆ ವಲಯದಿಂದ ಪರವಾನಿಗೆ ಪಡೆದು ಅಗತ್ಯ ವಸ್ತುಗಳ ಸಾಮಾಗ್ರಿ ಸಾಗಿಸುತ್ತಿದ್ದ ವಾಹನಗಳ ಚಾಲಕರಿಗೆ ಪೊಲೀಸರು ಮನಸೋ ಇಚ್ಛೆ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ನವಲೂರು ಬಳಿ ಇರುವ ರೇಲ್ವೆ ಗೂಡ್ಸ್ ಶೆಡ್ಗೆ ಪ್ರತಿದಿನ ಬರುವ ಅಗತ್ಯ ವಸ್ತುಗಳಾದ ಅಕ್ಕಿ, ಗೋಧಿ ಮತ್ತು ರಸಗೊಬ್ಬರಗಳನ್ನು ಸಾಗಿಸಲು 20ಕ್ಕೂ ಹೆಚ್ಚು ಲಾರಿಗಳಿಗೆ ಅವಕಾಶ ನೀಡಲಾಗಿತ್ತು. ಲಾರಿ ಚಾಲಕರು ಅವರಿಗೆ ನೀಡಿರುವ ಅಧಿಕೃತ ಪಾಸಗಳನ್ನು ಹಾಕಿಕೊಂಡು ಕ್ರೂಸರ್ನಲ್ಲಿ ಲಾರಿ ಬಳಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಹತ್ತಕ್ಕೂ ಹೆಚ್ಚು ಲಾರಿ ಚಾಲಕರನ್ನು ತಡೆದ ಪೊಲೀಸರು, ಪಾಸ್ ತೋರಿಸಿದ್ರೂ ಮನಸೋ ಇಚ್ಛೆ ಥಳಿಸಿದ್ದಾರೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಥಳಿತಕ್ಕೊಳಗಾದ ಲಾರಿ ಚಾಲಕರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸದ್ದಾರೆ. ಅಲ್ಲದೆ ಅಗತ್ಯ ವಸ್ತುಗಳ ಸಾಗಾಟದ ಲಾರಿ ಚಾಲಕರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.