ದಾವಣಗೆರೆ: ಕೊರೊನಾ ಮಹಾಮಾರಿಗೆ ರೈತರು ತತ್ತರಿಸಿದ್ದು, ಬಹುತೇಕ ಜಿಲ್ಲೆಗಳಲ್ಲಿ ತಾವು ಬೆಳೆದ ಬೆಳೆ ಮಾರಾಟವಾಗುತ್ತಿಲ್ಲ ಎಂಬ ಕಾರಣಕ್ಕೆ ನಾಶಪಡಿಸುತ್ತಿದ್ದಾರೆ.
ದಾವಣಗೆರೆ ತಾಲೂಕಿನ ಶಿವಪುರ, ಗಂಗನಕಟ್ಟೆ ಗ್ರಾಮದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ನಾಶಪಡಿಸಿದ್ದು, ತರಕಾರಿ ಖರೀದಿ ಇಲ್ಲದ್ದಕ್ಕೆ ಟೊಮಾಟೊ, ಎಲೆಕೋಸು ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿದ್ದಾರೆ. ಸುಮಾರು 5 ಎಕೆರೆಯಲ್ಲಿ ಟೊಮಾಟೊ, ಎಲೆಕೋಸು ಬೆಳೆದಿದ್ದ ರೈತ ಹೇಮಂತ್ ಹಾಗೂ ಹನುಮಂತಪ್ಪ ಅವರು ಬೆಲೆ ಇಲ್ಲದ ಕಾರಣ ಟ್ರ್ಯಾಕ್ಟರ್ ಮೂಲಕ ಬೆಳೆಯನ್ನು ನಾಶ ಪಡಿಸಿದ್ದಾರೆ. ಸರ್ಕಾರವೇ ನಮ್ಮ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.
ಸುಮಾರು 1 ಲಕ್ಷ ರೂ. ಖರ್ಚು ಮಾಡಿ ತರಕಾರಿ ಬೆಳೆ ಬೆಳೆಯಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಒಂದೆಡೆ ತರಕಾರಿ ಬೆಲೆ ಕುಸಿತ ಇನ್ನೊಂದೆಡೆ ಖರೀದಿಸುವರೇ ಇಲ್ಲದಂತಾಗಿದೆ. ಹೀಗಾಗಿ ಅನ್ನದಾತರು ಬೆಳೆಯನ್ನೇ ನಾಶ ಮಾಡುತ್ತಿದ್ದಾರೆ.