ಪಠಾಣ್ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಡೆಯನ್ನು ವಿರೋಧಿಸಿರುವ ಮಧ್ಯಪ್ರದೇಶದ ಸ್ಪೀಕರ್ ಗಿರೀಶ್ ಗೌತಮ್, ಅದೊಂದು ಅಸಹ್ಯಕರ ಬೆಳವಣಿಗೆ ಎಂದು ನುಡಿದಿದ್ದಾರೆ. ಅಲ್ಲಿ ಅಶ್ಲೀಲತೆ ಇರದೇ ಇದ್ದರೆ, ಶಾರುಖ್ ಖಾನ್ ತನ್ನದೇ ಮಗಳ ಜೊತೆ ಕೂತುಕೊಂಡು ಸಿನಿಮಾ ನೋಡಲಿ. ಮಗಳ ಪ್ರತಿಕ್ರಿಯೆ ಕೇಳಲಿ ಎಂದು ಹರಿಹಾಯ್ದಿದ್ದಾರೆ. ಪಠಾಣ್ ಸಿನಿಮಾದ ನಿರ್ಮಾಪಕರಿಗೆ ಬೆದರಿಕೆಯೊಡ್ಡಲಾಗಿದೆ ಎನ್ನುವ ಮಾತಿಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಅಭಿವ್ಯಕ್ತಿ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಕಲ್ಪನೆ ಇದ್ದರೆ ಅದು ತಪ್ಪು. ಪಠಾಣ್ ವಿಷಯದಲ್ಲಿ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ ಎಂದಿರುವ ಅವರು, ಮಗಳ ಜೊತೆ ಶಾರುಖ್ ಸಿನಿಮಾ ನೋಡಿದ ಫೋಟೋವನ್ನು ಅಪ್ ಲೋಡ್ ಮಾಡಿ ಜಗತ್ತಿಗೆ ತೋರಿಸುವಂತೆ ಸಲಹೆ ನೀಡಿದ್ದಾರೆ. ಸ್ಪೀಕರ್ ಮಾತು ಮಧ್ಯಪ್ರದೇಶದಲ್ಲಿ ಭಾರೀ ಚರ್ಚಗೆ ಕಾರಣವಾಗಿದೆ. ಥಿಯೇಟರ್ ಗಳಲ್ಲಿ ಪಠಾಣ್ ಸಿನಿಮಾವನ್ನು ನಿಷೇಧಿಸಬೇಕು ಎನ್ನುವ ಮಾತಿಗೆ ಪರೋಕ್ಷವಾಗಿ ಅವರು ಬೆಂಬಲವನ್ನೂ ಸೂಚಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ಹಾಕಿದ್ದ ವಿವಾದವು ಇದೀಗ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಈ ಹಿಂದೆ ಕೇವಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಾಯ್ಕಾಟ್ ಮಾತುಗಳನ್ನು ಆಡಿದ್ದರು. ಇದೀಗ ನೇರವಾಗಿ ರಾಜಕೀಯ ವ್ಯಕ್ತಿಗಳೇ ಅಖಾಡಕ್ಕೆ ಇಳಿದು ಪರ ವಿರೋಧದ ಮಾತುಗಳನ್ನು ಆಡುತ್ತಿದ್ದಾರೆ. ಅದರಲ್ಲೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಈ ಹಿಂದಿನ ವಿಡಿಯೋವೊಂದನ್ನು ಪೋಸ್ಟ್ ಮಾಡುವ ಮೂಲಕ ವಿವಾದದಲ್ಲಿ ಸುಖಾಸುಮ್ಮನೆ ಸಚಿವೆಯನ್ನು ಎಳೆತಂದಿದ್ದಾರೆ.
ಬಿಜೆಪಿಯ ಹಲವು ಮುಖಂಡರು ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದರು. ಶಾರುಖ್ ಖಾನ್ ಮತ್ತು ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದರು. ತರಾಟೆಗೆ ತೆಗೆದುಕೊಂಡವರ ಪಕ್ಷದಲ್ಲೇ ಇರುವ ಸ್ಮೃತಿ ಇರಾನಿ 1998ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕೇಸರಿ ತುಂಡುಡುಗೆಯಲ್ಲೇ ಕಾಣಿಸಿಕೊಂಡಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ಅವರು ಆ ವಿಡಿಯೋವನ್ನು ಬಳಸಿಕೊಳ್ಳಲಾಗುತ್ತಿದೆ. ಆ ವಿಡಿಯೋ ವೈರಲ್ ಕೂಡ ಆಗಿದೆ.