– ಕಾವೇರಿ ನದಿ ದಾಟಿ ಮಾದಪ್ಪನ ದರ್ಶನಕ್ಕೆ ಭಕ್ತ ಸಮೂಹ
ಚಾಮರಾಜನಗರ: ಮಹದೇಶ್ವರ ಬೆಟ್ಟದಲ್ಲಿ (MM Hills) ಮತ್ತೆ ಚಿರತೆ ದಾಳಿ ನಡೆದಿದೆ. ಮಾದಪ್ಪನ ದರ್ಶನಕ್ಕೆ ಪಾದಯಾತ್ರೆಗೆ ತೆರಳುತ್ತಿದ್ದ ಬಾಲಕ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾನೆ. ಇದರಿಂದ ಶಿವರಾತ್ರಿ ಜಾತ್ರೆಗೆ ಪಾದಯಾತ್ರೆ ಮೂಲಕ ಬರುತ್ತಿರುವ ಸಹಸ್ರಾರು ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ಮತ್ತೊಂದೆಡೆ ಪ್ರಾಣದ ಹಂಗು ತೊರೆದು ಸಹಸ್ರಾರು ಸಂಖ್ಯೆಯಲ್ಲಿ ಕಾವೇರಿ ನದಿ ದಾಟಿ ಎಂಟ್ರಿ ಕೊಡ್ತಿದ್ದಾರೆ. ಭಕ್ತರ ರಕ್ಷಣೆಯೇ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ (Forest Department) ದೊಡ್ಡ ಸವಾಲಾಗಿದೆ.

ಇತ್ತೀಚೆಗಷ್ಟೇ ಮಂಡ್ಯ (Mandya) ಜಿಲ್ಲೆಯ ಚೀರನಹಳ್ಳಿಯ ಪ್ರವೀಣ್ ಎಂಬ ಯುವಕ ಮಹದೇಶ್ವರ ಬೆಟ್ಟದ ರಂಗಸ್ವಾಮಿ ಒಡ್ಡು ಬಳಿ ಚಿರತೆ ದಾಳಿಗೆ ಬಲಿಯಾಗಿದ್ದ. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ನಡೆದಿದೆ. ಭಕ್ತರು ಪಾದಯಾತ್ರೆ ಮೂಲಕ ಮಹದೇಶ್ವರನ ದರ್ಶನಕ್ಕೆ ಹೊರಟಿದ್ದರು. ಆದರೆ ತಾಳ ಬೆಟ್ಟದ ಮುಂದೆ 2ನೇ ತಿರುವಿನಲ್ಲಿ ಇದ್ದಕ್ಕಿದ್ದಂತೆ ಚಿರತೆ ಪಾದಯಾತ್ರಿಗಳ ಗುಂಪಿನ ಮೇಲೆ ದಾಳಿ ನಡೆಸಿದೆ.
ಈ ವೇಳೆ ಗುಂಪಿನಲ್ಲಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಭುವನಹಳ್ಳಿ ಗ್ರಾಮದ ಚೇತನ್ ಎಂಬ 10 ವರ್ಷದ ಬಾಲಕನ ಕಿವಿಗೆ ಪರಚಿ ಗಾಯವಾಗಿದ್ದು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಜೊತೆಯಲ್ಲಿದ್ದವರು ಕಿರಿಚಿಕೊಳ್ಳುತ್ತಿದ್ದಂತೆ ಚಿರತೆ (leopard) ಕಾಡಿನೆಡೆಗೆ ಓಡಿಹೋಗಿದೆ. ಇದನ್ನೂ ಓದಿ: ಉದ್ಘಾಟನೆಗೆ ಸಿದ್ಧವಾಯ್ತು ಕೆ.ಆರ್ ಮಾರ್ಕೆಟ್ ಪಾರ್ಕಿಂಗ್ – ಕಸದ ರಾಶಿಯಿಂದ ತುಂಬಿದ್ದ ಜಾಗಕ್ಕೆ ಹೊಸ ಲುಕ್

ಅರಣ್ಯ, ಪೊಲೀಸ್ ಹಾಗು ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಸಿಬ್ಬಂದಿ ಒಳಗೊಂಡ ತಲಾ ನಾಲ್ವರ ತಂಡ ರಚಿಸಿ ಪ್ರತಿ ಕಿಲೋಮೀಟರ್ಗೆ ಒಂದು ತಂಡದಂತೆ ನಿಯೋಜಿಸಲಾಗಿದೆ. ಅಲ್ಲದೇ ಡ್ರೋನ್ ಕ್ಯಾಮೆರಾದ ಮೂಲಕ ವನ್ಯ ಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ. ಇಷ್ಟೆಲ್ಲ ಸುರಕ್ಷತಾ ಕ್ರಮ ಕೈಗೊಂಡಿದ್ದರೂ ಚಿರತೆ ದಾಳಿ ನಡೆಸಿರುವುದು ಮಾದಪ್ಪನ ಭಕ್ತರಲ್ಲಿ ಆತಂಕ ಸೃಷ್ಟಿಸಿದೆ. ಬೇರೆ ಬೇರೆ ಕಡೆಗಳಲ್ಲಿ ಸೆರೆ ಹಿಡಿದ ಚಿರತೆಗಳನ್ನು ಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ಬಿಡುಗಡೆ ಮಾಡುತ್ತಿರುವುದೇ ಚಿರತೆಗಳ ಹಾವಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಹೊಸ ‘ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್’ ಪರಿಚಯಿಸಿದ ವಾಟ್ಸಾಪ್ – ಅಪ್ಲಿಕೇಶನ್ ಬಳಕೆಗೆ ಹಣ ಪಾವತಿಸ್ಬೇಕಾ?
ಮಲೆಮಹದೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಆಚರಣೆಗೆ ಮಹದೇಶ್ವರ ಬೆಟ್ಟ ಸಜ್ಜಾಗಿದೆ. ಮಾದಪ್ಪನ ಸನ್ನಿಧಿಯಲ್ಲಿ ಶಿವರಾತ್ರಿ ಆಚರಣೆ ಮಾಡುವುದೆಂದರೆ ಭಕ್ತರಿಗೆ ಎಲ್ಲಿಲ್ಲದ ಉತ್ಸಾಹ. ಹಾಗಾಗಿ ಫೆಬ್ರುವರಿ 15 ರಂದು ನಡೆಯುವ ಮಹಾಶಿವರಾತ್ರಿಗೆ ಮಲೆಮಹದೇಶ್ವರ ಬೆಟ್ಟದತ್ತ ಭಕ್ತ ಸಾಗರ ಹರಿದುಬರುತ್ತಿದೆ. ವಯಸ್ಸಿನ ಬೇಧವಿಲ್ಲದೆ ಮಹಿಳೆಯರು ಮಕ್ಕಳೆನ್ನದೇ ಸಹಸ್ರಾರು ಭಕ್ತರು ಕಾಲ್ನಡಿಗೆಯಲ್ಲೇ ಬರತೊಡಗಿದ್ದಾರೆ. ಕೋಲಾರ, ಬೆಂಗಳೂರು, ರಾಮನಗರ, ಚನ್ನಪಟ್ಟಣ, ಕನಕಪುರ, ಹಲಗೂರು, ಮಳವಳ್ಳಿ, ಮಂಡ್ಯ ಹೀಗೆ ನಾನಾ ಕಡೆಯಿಂದ ಕಾಡುಮೇಡು ಸುತ್ತಿ ಭಕ್ತರು ಮಾದಪ್ಪನ ಬೆಟ್ಟದತ್ತ ಧಾವಿಸುತ್ತಿದ್ದಾರೆ. ಜೀವಭಯ ಲೆಕ್ಕಿಸದೇ ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಹರಿಯುವ ಕಾವೇರಿ ನದಿ ದಾಟಿ ಆಗಮಿಸುತ್ತಿದ್ದಾರೆ. ನೀರಿನ ಸೆಳೆತ ಇರುವುದರಿಂದ ನದಿಯ ಎರಡೂ ದಡಗಳಿಗೆ ಹಗ್ಗ ಕಟ್ಟಿ ಹಗ್ಗ ಹಿಡಿದು ನದಿ ದಾಟಿ ಸಹಸ್ರಾರು ಭಕ್ತರು ಮಾದಪ್ಪನ ಸನ್ನಿಧಿಗೆ ಬರತೊಡಗಿದ್ದಾರೆ.

