ಮದುವೆಯಾಗಿ ಖುಷಿಯಿಂದ ಇರಬೇಕಾಗಿದ್ದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್, ತಾವು ಮಾಡಿದ ತಪ್ಪಿಂದಾಗಿ ಕಿರಿಕಿರಿ ಅನುಭವಿಸಬೇಕಾಗಿದೆ. ಮದುವೆಯಾದ ಮರುದಿನವೇ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಈ ಜೋಡಿ ಹೋಗಿತ್ತು. ಈ ವೇಳೆಯಲ್ಲಿ ಎರಡು ತಪ್ಪುಗಳನ್ನು ನಯನತಾರಾ ಮಾಡಿದ್ದಾರೆ. ಹಾಗಾಗಿ ನಯನತಾರಾ ಸಂಕಷ್ಟ ಎದುರಿಸಬೇಕಾಗಿದೆ. ಚಪ್ಪಲಿ ಹಾಕಿಕೊಂಡು ದೇವಸ್ಥಾನದ ಆವರಣದಲ್ಲಿ ಓಡಾಡಿದಕ್ಕೆ ಈಗಾಗಲೇ ವಿಘ್ನೇಶ್ ಶಿವನ್ ಕ್ಷಮೆ ಕೇಳಿದ್ದರೂ, ಮತ್ತೊಂದು ತಪ್ಪಿಗಾಗಿ ಅವರು ಲೀಗಲ್ ನೋಟಿಸ್ ಗೆ ಉತ್ತರಿಸಬೇಕಾಗಿದೆ.
ತಿರುಪತಿ ದೇವಸ್ಥಾನದಲ್ಲಿ ಆವರಣದಲ್ಲಿ ಖಾಸಗಿ ಕ್ಯಾಮೆರಾಗಳಿಗೆ ಅವಕಾಶವಿಲ್ಲವಂತೆ. ಆದರೆ, ನಯನತಾರಾ ಮತ್ತು ವಿಘ್ನೇಶ್ ಶಿವನ್ ತಮ್ಮೊಂದಿಗೆ ಖಾಸಗಿ ಕ್ಯಾಮೆರಾಮೆನ್ ಗಳನ್ನು ಕರೆದುಕೊಂಡು ಬಂದಿದ್ದರಂತೆ. ಅಲ್ಲದೇ, ಮಾತಾ ಬೀದಿಯಲ್ಲಿ ನಯನತಾರಾ ಚಪ್ಪಲಿ ಧರಿಸಿಕೊಂಡು ಓಡಾಡಿದ್ದಾರೆ. ಈ ಕಾರಣದಿಂದಾಗಿ ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್ ನ ಮುಖ್ಯ ವಿಜಿಲೆನ್ಸ್ ಸೆಕ್ಯುರಿಟಿ ಆಫೀಸರ್ ನರಸಿಂಹ ಕಿಶೋರ್, ಈ ಕುರಿತು ಮಾತನಾಡಿದ್ದಾರೆ. ಎರಡು ಪ್ರಮುಖ ನಿಯಮಗಳನ್ನು ಅವರು ಉಲ್ಲಂಘಿಸಿದ್ದಕ್ಕಾಗಿ ಲೀಗ್ ನೋಟಿಸ್ ಕಳುಹಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಮೇಲೆ ಹಲ್ಲೆ ಆರೋಪ: ಜೈ ಜಗದೀಶ್ ಪ್ರಕರಣಕ್ಕೆ ಟ್ವಿಸ್ಟ್
ವಿಘ್ನೇಶ್ ಶಿವನ್ ಮತ್ತು ನಯನತಾರಾ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಈ ಜೋಡಿ ಸಾಂಪ್ರದಾಯಿಕ ಉಡುಪಿನಲ್ಲೇ ದೇವಸ್ಥಾನ ಆವರಣಕ್ಕೆ ಪ್ರವೇಶ ಮಾಡಿದರು. ಹಳದಿ ಬಣ್ಣದ ಸೀರೆಯಲ್ಲಿ ನಯನತಾರಾ ಕಂಗೊಳಿಸುತ್ತಿದ್ದರೆ, ಬಿಳಿ ಬಣ್ಣದ ಅಂಗಿ ಮತ್ತು ಪಂಚೆ ತೊಟ್ಟಿದ್ದರು ವಿಘ್ನೇಶ್. ಆದರೆ, ನಯನತಾರಾ ದೇವಸ್ಥಾನದ ಆವರಣದ ಒಳಗೆ ಚಪ್ಪಲಿ ಧರಿಸಿದ್ದರು ಎನ್ನುವುದೇ ಇದೀಗ ಆಕ್ರೋಶಕ್ಕೆ ಕಾರಣವಾಗಿತ್ತು.
ಪತಿ ವಿಘ್ನೇಶ್ ಬರಿಗಾಲಲ್ಲಿ ನಡೆದುಕೊಂಡು ಬಂದರೆ, ನಯನತಾರಾ ಚಪ್ಪಲಿ ಧರಿಸಿದ್ದರಂತೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಯನತಾರಾ ವಿರುದ್ಧ ಭಕ್ತರು ಮುಗಿಬಿದ್ದಿದ್ದರು. ವಿವಾದ ಸೃಷ್ಟಿ ಆಗುತ್ತಿದ್ದಂತೆಯೇ ತಿರುಮಲ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿದ್ದಾರೆ. ಆದರೆ ,ಇದೀಗ ನೋಟಿಸ್ ನೀಡಲು ಮುಂದಾಗಿದ್ದಾರೆ.