ಉಡುಪಿ: ಜಾತಿ, ಧರ್ಮ, ದೇವರ ಮೇಲೆ ನಂಬಿಕೆ ಇಲ್ಲದ ಕಾನೂನು ಸಚಿವ ಮಾಧುಸ್ವಾಮಿ ಒತ್ತಾಯಕ್ಕೆ ಮಣಿದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ.
ಜಿಲ್ಲೆಯ ಬೈಂದೂರು ಬಿಜೆಪಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಒತ್ತಾಯ ಮಾಡಿ, ಚಂಡಿಕಾ ಹೋಮದಲ್ಲಿ ಭಾಗಿಯಾಗಿ ಪೂಜೆಗೆ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ, ನನಗೆ ಗ್ರಹಣ- ಹೋಮ ಎಲ್ಲ ಗೊತ್ತಿಲ್ಲ. ನಮ್ಮ ಶಾಸಕರು ಪೂಜೆಗೆ ಕೂರಿಸಿದ್ರು ನಾನು ಕೂತೆ. ಇವತ್ತಿನ ಪೂಜೆಗೂ ಗ್ರಹಣಕ್ಕೂ ಸಂಬಂಧವಿಲ್ಲ ಎಂದರು.
ನಾನು ಹರಕೆ ಹೊರುವವನಲ್ಲ. ನಮ್ಮ ಕಥೆನೇ ಬೇರೆ ಇದೆ, ಅದೆಲ್ಲಾ ಈಗ್ಯಾಕೆ ಬಿಡಿ. ರಾತ್ರಿಯೇ ಜಾಗ ಖಾಲಿ ಮಾಡಿ ಉಡುಪಿಯಲ್ಲಿ ವಾಸ್ತವ್ಯ ಹೂಡಲು ಹೊರಟಿದ್ದೆ. ನಾನು ನಾಸ್ತಿಕ, ಆದರೆ ಎಲ್ಲರ ಒತ್ತಾಯಕ್ಕೆ ಮಣಿದು ಹೋಮದಲ್ಲಿ ಭಾಗಿಯಾಗಿದ್ದೇನೆ ಎಂದು ಮಾಧುಸ್ವಾಮಿ ಹೇಳಿದರು. ನಾನು ಹೋಮದಲ್ಲಿ ಭಾಗಿಯಾದರೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತದೆ ಎಂದು ಮೊದಲೇ ಗೊತ್ತಿತ್ತು. ಆದರೆ ಎಲ್ಲರ ಒತ್ತಾಯಕ್ಕೆ ಮಣಿದು ಪೂಜೆ, ಹೋಮದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿ ಮಾಧುಸ್ವಾಮಿ ನಕ್ಕರು.