ಬೆಂಗಳೂರು: ಇಂದು ಒಕ್ಕಲಿಗ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ. ಪ್ರತಿಭಟನೆಗೆ ಕರೆ ಕೊಟ್ಟವರು ಸಹ ಶಾಂತಿ ಕಾಪಾಡಿದ್ದಾರೆ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ನಮ್ಮ ನಗರದ ಪೊಲೀಸ್ ಇಲಾಖೆ ಪ್ರತಿಭಟನೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಂಡಿದೆ. ಇದು ನಮ್ಮ ಪೊಲೀಸ್ ಇಲಾಖೆಯ ದಕ್ಷತೆಯನ್ನು ತೋರಿಸುತ್ತದೆ. ಅಶೋಕ ಪಿಲ್ಲರ್ ಬಳಿ ಕಲ್ಲೆಸೆತ ಆಗಿದೆ ಎನ್ನುತ್ತಾರೆ. ಆದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಒಟ್ಟಿನಲ್ಲಿ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿಯಿಂದ ಒಕ್ಕಲಿಗ ನಾಯಕರ ಟಾರ್ಗೆಟ್ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಸಮುದಾಯದವರೂ ಈಗ ಮೆಚ್ಯೂರ್ ಆಗಿದ್ದಾರೆ. ಯಾವ ಸಮುದಾಯವನ್ನೂ ತಪ್ಪು ದಾರಿಗೆ ಎಳೆಯಕ್ಕಾಗಲ್ಲ. ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನಗಳು ಆಗುತ್ತಿರುತ್ತವೆ. ಆದರೆ ಸಮಾಜ ಜಾಗೃತವಾಗಿದೆ. ಈ ರೀತಿಯ ಪ್ರಯತ್ನಗಳಿಗೆ ಸಮಾಜ ಬಲಿಯಾಗಲ್ಲ. ಸಮಾಜ ಎಲ್ಲವನ್ನೂ ಎದುರಿಸುವ ಶಕ್ತಿ ಹೊಂದಿದೆ. ಯಾರೂ ಯಾರನ್ನೂ ಯಾರ ಮೇಲೂ ಎತ್ತಿ ಕಟ್ಟೋಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗುಜರಾತ್ನಲ್ಲಿ ಸಂಚಾರಿ ನಿಯಮಗಳಿಗೆ ದಂಡದ ಪ್ರಮಾಣ ಇಳಿಕೆ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಚಾರ ಸಿಎಂ ಗಮನದಲ್ಲಿದೆ. ಆ ಎಲ್ಲದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಾರೆ. ದುಬಾರಿ ದಂಡ ಕಡಿತದ ಬಗ್ಗೆ ಸಿಎಂ ಚಿಂತನೆ ಮಾಡುತ್ತಿದ್ದಾರೆ. ಅದರ ಬಗ್ಗೆ ಅವರೇ ಸ್ಪಷ್ಟನೆ ಕೊಡಲಿದ್ದಾರೆ ಎಂದು ತಿಳಿಸಿದರು.