– ಸಂತಸ ವ್ಯಕ್ತಪಡಿಸಿದ ಜಯಮೃತ್ಯುಂಜಯ ಶ್ರೀ
ವಿಜಯಪುರ: ಬೆಳಗಾವಿಯಲ್ಲಿ 2ಎ ಮೀಸಲಾತಿ (2A Reservation) ಹೋರಾಟಗಾರರ ಮೇಲೆ ನಡೆದಿದ್ದ ಲಾಠಿಚಾರ್ಜ್ (Lathi Charge) ಪ್ರಕರಣದ ನ್ಯಾಯಾಂಗ ತನಿಖೆಗೆ ತಡೆ ನೀಡಬೇಕು ಎಂದು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಈ ವಿಚಾರಕ್ಕೆ ವಿಜಯಪುರದಲ್ಲಿ (Vijayapura) ಜಯಮೃತ್ಯುಂಜಯ ಸ್ವಾಮೀಜಿ (Jayamrutyunjaya Swamiji )ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ, ಅವರು ಮಾತನಾಡಿದರು. ಕಾನೂನು ಬಾಹಿರವಾಗಿ ಪೊಲೀಸರಿಗೆ ಕುಮ್ಮಕ್ಕು ಕೊಟ್ಟು ಮಾರಣಾಂತಿಕವಾಗಿ ಸರ್ಕಾರ ಹಲ್ಲೆ ಮಾಡಿಸಿತ್ತು. ಕಾನೂನು ಬಾಹಿರವಾಗಿ ಹಲ್ಲೆ ಮಾಡಿರುವಂತಹ ಅಧಿಕಾರಿಗಳನ್ನ ಅಮಾನತು ಮಾಡಬೇಕು ಎಂದು ನಾವು ಆಗ್ರಹಿಸಿದ್ದೆವು ಎಂದಿದ್ದಾರೆ. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್
ಕೆಲವು ಸಮಾಜದ ನಾಯಕರು ಅಧಿವೇಶನದಲ್ಲೂ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ರಾಜ್ಯ ಸರ್ಕಾರ ಇದಕ್ಕೆ ಸ್ಪಂದನೆ ಮಾಡಲಿಲ್ಲ. ನಂತರ ನಾನು 9 ದಿನಗಳ ಸತ್ಯಾಗ್ರಹ ಮಾಡಿ ಆಗ್ರಹಿಸಿದ್ದೆ. ಅದಕ್ಕೂ ಕ್ಯಾರೆ ಎನ್ನಲಿಲ್ಲ. ಬಳಿಕ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೆವು. ಏ.4 ರಂದು ನಮ್ಮ ಅರ್ಜಿ ಸ್ವೀಕಾರ ಮಾಡಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಅಲ್ಲದೇ 3 ತಿಂಗಳ ಒಳಗಾಗಿ ಮೂರು ಜನ ನ್ಯಾಯಮೂರ್ತಿಗಳ ಮೂಲಕ ತನಿಖೆ ಮಾಡಿ ವರದಿ ನೀಡಲು ಆದೇಶಿಸಿತ್ತು.
3 ತಿಂಗಳು ಕಳೆದ್ರೂ ಸರ್ಕಾರ ತನಿಖೆ ಮಾಡುವ ಪ್ರಯತ್ನ ಮಾಡಲಿಲ್ಲ. ತಮ್ಮ ತಪ್ಪು ಮುಚ್ಚಿಕೊಳ್ಳಲು ಹೈಕೋರ್ಟ್ ಆದೇಶಕ್ಕೆ ತಡೆ ತರುವ ಪ್ರಯತ್ನ ಮಾಡಲಾಗಿತ್ತು. ಇವತ್ತು ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದ ನಮಗೆ ಬಹಳ ಸಂತೋಷವಾಗಿದೆ ಎಂದರು. ಇದನ್ನೂ ಓದಿ: ಹನುಮ ಧ್ವಜ ತೆರವು ವೇಳೆ ಲಾಠಿಚಾರ್ಜ್ – ಕಾನೂನು ಹೋರಾಟಕ್ಕೆ ಮುಂದಾದ ಗ್ರಾಮಸ್ಥರು