ಬೆಂಗಳೂರು: ಖ್ಯಾತ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲತಾ ಮಂಗೇಶ್ಕರ್ ಅವರ ಹಾಡುಗಳು ಕೇವಲ ಸಿನಿಮಾಕ್ಕೆ ಸೀಮಿತವಾಗಿರಲಿಲ್ಲ. ಭಜನೆಗಳು, ದೇಶಭಕ್ತಿ ಗೀತೆಗಳು, ದೇವರ ಗೀತೆಗಳನ್ನು ಹಾಡಿದ್ದಾರೆ. ʻಏ ಮೇರೆ ವತನ್ ಕಿ ಲೋಗೋʼ ಹಾಡು ಇವತ್ತಿಗೂ ಕೇಳಿದರೆ ದೇಶಭಕ್ತಿ ಉಕ್ಕಿಹರಿಯುತ್ತೆ. ಈ ಹಾಡು ಹಿಮಾಲಯದಷ್ಟೇ ಚಿರಸ್ಥಾಯಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್ಲಾಲ್ ನೆಹರೂ
ಲತಾ ಮಂಗೇಶ್ಕರ್ ಅವರು ಕನ್ನಡದಲ್ಲೂ ಹಾಡಿದ್ದಾರೆ. ಅವರಿಗೆ ಕನ್ನಡದ ನಂಟೂ ಇತ್ತು. ಅವರ ನಿಧನದಿಂದ ನಮ್ಮೆಲ್ಲರಿಗೂ ಅಪಾರ ದುಃಖವಾಗಿದೆ. ಭಾರತದ ಕೋಗಿಲೆ ಹಾಡೋದನ್ನು ನಿಲ್ಲಿಸಿದೆ. ಇಡೀ ಭಾರತ ದುಃಖದಲ್ಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಸಾರಸ್ವತ ಲೋಕದಲ್ಲಿ ಸದಾ ಮಿನುಗುತ್ತಿರುತ್ತಾರೆ ಎಂದು ಸ್ಮರಿಸಿದ್ದಾರೆ.
ದೆಹಲಿ ಪ್ರವಾಸ ಕುರಿತು ಮಾತನಾಡಿದ ಅವರು, ನಾಳೆ ಬೆಳಗ್ಗೆ ದೆಹಲಿಗೆ ಹೋಗುತ್ತಿದ್ದೇನೆ. ಸಂಸದರ ಜೊತೆ ಸಭೆ ನಡೆಸುತ್ತೇನೆ. ಕೇಂದ್ರದ ಸಚಿವರ ಜೊತೆ ಜಲ ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತೇನೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಸಮಯ ಕೇಳಿದ್ದೇನೆ. ಬಜೆಟ್, ಹಣಕಾಸು, ಜಿಎಸ್ಟಿ ಬಗ್ಗೆ ಚರ್ಚೆ ನಡೆಸುತ್ತೇನೆ. ಪಕ್ಷದ ವರಿಷ್ಠರ ಸಮಯವನ್ನೂ ಕೇಳಿದ್ದೇನೆ. ವರಿಷ್ಠರು ಸಂಸತ್ ಅಧಿವೇಶನ ಹಾಗೂ ಯುಪಿ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇವತ್ತು ಸಂಜೆ ಯಾರೆಲ್ಲರ ಭೇಟಿಗೆ ಸಮಯ ಸಿಗುತ್ತೆ ಅಂತ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ರ ಮೊದಲ ಹಾಡನ್ನು ಸಿನಿಮಾದಿಂದ ತೆಗೆಯಲಾಗಿತ್ತು – ನೀವು ತಿಳಿಯಲೇಬೇಕಾದ 10 ಸಂಗತಿಗಳು ಇಲ್ಲಿವೆ!