– ವಿವಿಧ ಸಂಘ ಸಂಸ್ಥೆಗಳಿಂದ ದಾಸೋಹ
ಕೋಲಾರ: ಕಡೆಯ ಕಾರ್ತಿಕ ಸೋಮವಾರದ ಹಿನ್ನೆಲೆ ರಾಜ್ಯದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಅಂತರಗಂಗೆಯಲ್ಲಿ (Antara Gange) ಕಾಶಿ ವಿಶ್ವೇಶ್ವರನ ದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ಎಲ್ಲೆಲ್ಲೂ ರಾರಾಜಿಸುತ್ತಿದ್ದ ಕೇಸರಿ ಬಾವುಟಗಳ ನಡುವೆ ಜನಸಾಗರ ಭಕ್ತಿಯಲ್ಲಿ ಮಿಂದೆದ್ದಿತ್ತು.
ರಾಜ್ಯದ ದಕ್ಷಿಣ ಕಾಶಿ ಎಂದೇ ಕರೆಯಲಾಗುವ ಕೋಲಾರ (Kolar) ನಗರಕ್ಕೆ ಹೊಂದಿಕೊಂಡಿರುವ ಪುರಾತನ ಇತಿಹಾಸ ಹೊಂದಿರುವ ಪ್ರಸಿದ್ಧ ಯಾತ್ರಾಸ್ಥಳ ಅಂತರಗಂಗೆಯಲ್ಲಿ ಇಂದು ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಪ್ರತಿ ವರ್ಷ ಕಾಶಿ ವಿಶ್ವೇಶ್ವರ (Kashi Vishweshwara) ಸ್ವಾಮಿಯ ಜಾತ್ರೆ ನಡೆಯುತ್ತದೆ. ಬಸವನ ಬಾಯಿಂದ ಹರಿದು ಬರುವ ಗಂಗೆ ಕಾಶಿಯಿಂದಲೇ ಹರಿದು ಬರುತ್ತಾಳೆಂಬ ಪ್ರತೀತಿ ಇದೆ. ಜೊತೆಗೆ ಇಲ್ಲಿ ಸಾಕ್ಷಾತ್ ಕಾಶಿ ವಿಶ್ವೇಶ್ವರಸ್ವಾಮಿಯೇ ನೆಲೆಸಿದ್ದಾನೆ. ಈ ಸಲುವಾಗಿ ಪ್ರತಿ ವರ್ಷ ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಅಂತರ ಗಂಗೆಯಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗುತ್ತದೆ. ಇದನ್ನೂ ಓದಿ: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿ – 13ನೇ ವರ್ಷದಲ್ಲೇ ಕೋಟ್ಯಧಿಪತಿ
ಈ ದಿನದಂದು ಇಲ್ಲಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ಇನ್ನು ವಿಶೇಷವಾಗಿ ಇಲ್ಲಿಗೆ ಬರುವ ಭಕ್ತರು ಕಾಶಿ ವಿಶ್ವೇಶ್ವರ ಸ್ವಾಮಿಯ ದರ್ಶನ ಪಡೆದು ತಮ್ಮ ಕೋರಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸುತ್ತಾರೆ. ಇಂದು ವಿಶೇಷವಾಗಿ ಕಾಶಿ ವಿಶ್ವೇಶ್ವರ ಸ್ವಾಮಿಗೆ ಮುಂಜಾನೆ ನಾಲ್ಕು ಗಂಟೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಹೋಮ ಹವನ ಜೊತೆಗೆ ಸಂಜೆ ವೇಳೆಗೆ ತೆಪ್ಪೋತ್ಸವ ಕಾರ್ಯಕ್ರಮಗಳು ನಡೆದಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಧ್ವನಿಯಾಗಿದ್ದ ಇಸ್ಕಾನ್ನ ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್
ಇನ್ನು ಈ ವಿಶೇಷ ದಿನದಂದು ಇಲ್ಲಿಗೆ ಹರಿದು ಬರುವ ಭಕ್ತಸಾಗರ, ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಮುಜರಾಯಿ ಇಲಾಖೆಗೆ ಸೇರುವ ಈ ಯಾತ್ರಾ ಸ್ಥಳದಲ್ಲಿ ಭಜರಂಗದಳ, ವಿಶ್ವಹಿಂದೂ ಪರಿಷತ್ ಸೇರಿದಂತೆ ಹಿಂದೂ ಪರ ಸಂಘಟನೆಗಳು ಕಳೆದ 25 ವರ್ಷಗಳಿಂದ ಇಲ್ಲಿಗೆ ಬರುವ ಭಕ್ತರಿಗೆ ಕುಡಿಯುವ ನೀರು, ಉಚಿತ ಬಸ್ ವ್ಯವಸ್ಥೆ ಮಾಡಿದರೆ, ವಿವಿಧ ಸಂಘ ಸಂಸ್ಥೆಗಳಿಂದ, ಸ್ನೇಹಿತರ ಬಳಗದಿಂದ ಅನ್ನದಾನ, ಪ್ರಸಾದ ವಿತರಣೆ ಮಾಡಲಾಗುತ್ತದೆ. ಇದನ್ನೂ ಓದಿ: ಬುಧವಾರಕ್ಕೆ ಸಂಸತ್ ಅಧಿವೇಶನ ಮುಂದೂಡಿಕೆ
ಇನ್ನು ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷವಂತೂ ಅಂತರಗಂಗೆಗೆ ಬಂದ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇತ್ತು. ಅದಕ್ಕೆ ತಕ್ಕಂತೆ ಬಂದ ಅಷ್ಟೂ ಭಕ್ತರಿಗೆ ಪ್ರಸಾದ, ಅನ್ನದಾನ ಮಾಡುವವರ ಸಂಖ್ಯೆಯೂ ಹೆಚ್ಚಾಗಿತ್ತು. ದೇವರ ದರ್ಶನಕ್ಕೆ ಬಂದ ಯಾವೊಬ್ಬ ಭಕ್ತಾದಿಯೂ ಹಸಿವಿನಿಂದ ವಾಪಸ್ಸಾಗದ ರೀತಿಯಲ್ಲಿ ಅನ್ನದಾನ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು. ಇನ್ನು ದೇವರ ದರ್ಶನ ಪಡೆದ ಭಕ್ತರಂತೂ ಪುನೀತರಾಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸು ದೇವರೇ ಎಂದು ಪ್ರಾರ್ಥನೆ ಸಲ್ಲಿಸಿದರು. ಇನ್ನು ಸ್ಥಳದ ಮಹಿಮೆಯಂತೆ ವರ್ಷದ 365 ದಿನವೂ ಬಸವನ ಬಾಯಿಂದ ಗಂಗೆ ಹರಿದು ಬರುತ್ತಾಳೆ ಅನ್ನೋ ನಂಬಿಕೆ ಇದೆ. ಎಂಥಹದ್ದೇ ಬರಗಾಲವಿದ್ದರೂ ಕೂಡಾ ಇಲ್ಲಿ ನೀರು ಮಾತ್ರ ನಿಲ್ಲೋದಿಲ್ಲ. ಅಷ್ಟೇ ಅಲ್ಲದೆ ಈ ನೀರನ್ನು ಕುಡಿದರೆ ಹಲವು ಚರ್ಮವ್ಯಾಧಿಗಳು ಸೇರಿದಂತೆ ಹಲವು ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು. ಇದನ್ನೂ ಓದಿ: ನಾನೇನು ತಪ್ಪು ಮಾಡಿಲ್ಲ, ಐ ಡೋಂಟ್ ಕೇರ್: ಬೈರತಿ ಸುರೇಶ್
ಒಟ್ಟಾರೆ ಇಂದು ಕಾರ್ತಿಕ ಮಾಸದ ಕೊನೆಯ ಸೋಮವಾರ ಶಿವನಿಗೆ ವಿಷೇಶವಾದ ದಿನವಾಗಿದ್ದು, ಈ ದಿನದಲ್ಲಿ ಶಿವನ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ಕಾಶಿಗೆ ಹೋಗಲಾರದ ಜನರು ಈ ದಕ್ಷಿಣ ಕಾಶಿ ಎಂದು ಹೆಸರಾಗಿರುವ ಕೋಲಾರದ ಅಂತರಗಂಗೆಯಲ್ಲಿ ಬಸವನ ಬಾಯಿಯಿಂದ ಬರುವ ಗಂಗಾ ಜಲವನ್ನು ಕುಡಿದು ಕಾಶಿ ವಿಶ್ವೇಶ್ವರನ ದರ್ಶನ ಪಡೆದು ಪುನೀತರಾಗುತ್ತಾರೆ. ಇದನ್ನೂ ಓದಿ: ಸಿಎಂ ಬಂಪರ್ ಗಿಫ್ಟ್ – ಹೆಸ್ಕಾಂ ಅಧ್ಯಕ್ಷರಾಗಿ ಅಜ್ಜಂಪೀರ್ ಖಾದ್ರಿ ನೇಮಕ