ಗದಗ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ ಜೋರಾಗಿದೆ. ಕಾರಣ ಗದಗ-ಬೆಟಗೇರಿ ನಗರ ಸಭೆಯ ವ್ಯಾಪ್ತಿಯ ಆಸ್ತಿಯನ್ನು ಖಾಸಗಿ ಭೂ ಬಾಡಿಗೆದಾರರಿಂದ ಜಪ್ತಿ ಮಾಡಲಾಗುತ್ತಿದೆ. ಗದಗ ನಗರಸಭೆಗೆ ಸೇರಿದ ಕೋಟ್ಯಂತರ ಮೌಲ್ಯದ 54 ವಕಾರಸಾಲು (ಗೋಡೌನ್) ಗಳನ್ನು ವಾಪಸ್ ಪಡೆಯಲು ನಗರಸಭೆ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದೆ.
ನ್ಯಾಯಾಲಯದ ಆದೇಶದಂತೆ ಸ್ಥಳ ತೆರವು ಮಾಡುವಂತೆ ಈಗಾಗಲೇ ವಕಾರಸಾಲುಗಳ ನಿವಾಸಿಗಳಿಗೆ ನೋಟಿಸ್ ನೀಡಲಾಗಿತ್ತು. ನಗರದ ಹೃದಯಭಾಗದಲ್ಲಿರುವ ಈ ವಕಾರಸಾಲುಗಳನ್ನು ಹತ್ತಿ, ಅರಳಿ, ಶೇಂಗಾ, ಮೆಣಸಿನಕಾಯಿ ವ್ಯಾಪಾರ ಮಾಡುವ ಸಲುವಾಗಿ 1889 ರಲ್ಲಿ ನೂರು ವರ್ಷಗಳ ಒಪ್ಪಂದದ ಮೇರೆಗೆ ವರ್ತಕರಿಗೆ ಬಾಡಿಗೆಗೆ ನೀಡಲಾಗಿತ್ತು.
ಲೀಜ್ ಅವಧಿ ಪೂರ್ಣಗೊಂಡು 25 ವರ್ಷ ಕಳೆದಿದ್ದರೂ ಬಾಡಿಗೆದಾರರು ಆಸ್ತಿಯನ್ನು ನಗರಸಭೆಗೆ ವಾಪಸ್ ನೀಡಿರಲಿಲ್ಲ. ಈ ವಿಷಯವಾಗಿ ನಗರಸಭೆ ಮತ್ತು ಬಾಡಿಗೆದಾರರ ನಡುವೆ ದಶಕಗಳಿಂದ ಹಗ್ಗ ಜಗ್ಗಾಟ ಮುಂದುವರಿದಿತ್ತು. ಇಂದಿನಿಂದ 2 ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ.
ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಗರದ ಎಪಿಎಂಸಿಯಿಂದ ಕೆ.ಎಚ್ ಪಾಟೀಲ ವೃತ್ತ, ಗಾಂಧಿ ವೃತ್ತದಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗೆ 500 ಪೊಲೀಸರು, 400 ಜನ ಪೌರಕಾರ್ಮಿಕರ ನೆರವು ಪಡೆಯಲಾಗಿದೆ. ಸುಮಾರು 40 ಜೆಸಿಬಿ, 5 ಇಟಾಚಿ, 70ಕ್ಕೂ ಅಧಿಕ ಟ್ರ್ಯಾಕ್ಟರ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಮ್. ಜಿ ಹಿರೇಮಠ ಹೇಳಿದರು.