ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಅಗಲಿ ಇಂದಿಗೆ (ಅ.29) 2 ವರ್ಷಗಳು ಕಳೆದಿದೆ. ಅಪ್ಪು ಪುಣ್ಯ ಸ್ಮರಣೆಯಂದು ಹಿರಿಯ ಸಹೋದರಿ ಲಕ್ಷ್ಮಿ (Lakshmi Govindaraju) ಅವರು ಪುನೀತ್ ಬಗ್ಗೆ ಮಾತನಾಡಿದ್ದಾರೆ. ಸಹೋದರನ ಮೇಲಿನ ಅಭಿಮಾನಿಗಳ(Fans) ಪ್ರೀತಿ ಕಂಡು ಲಕ್ಷ್ಮಿ ಅವರು ಭಾವುಕರಾಗಿದ್ದಾರೆ.
ನಮ್ಮ ನೋವಿಗಿಂತ ಅಭಿಮಾನಿಗಳ ದುಃಖ ಜಾಸ್ತಿ ಅನಿಸುತ್ತಿದೆ. ಪುನೀತ್ ಅಗಲಿದ ದಿನ ಅವರ ಮುಖ ನೋಡಿ ಅಳೋದೇ ಆಗಿ ಹೋಯ್ತು. ನಮಗೆ ಆದರೆ ರಕ್ತ ಸಂಬಂಧ ಇತ್ತು. ಆದರೆ ಬೇರೇ ಅವರು ಏನು ಸಂಬಂಧವಿಲ್ಲದಿದ್ರೂ ಪುನೀತ್ನ ತುಂಬಾ ಪ್ರೀತಿ ಮಾಡ್ತಿದ್ದರು. ನಮ್ಮ ಮನೆಯಲ್ಲಿನ ವ್ಯಕ್ತಿನೇ ತೀರಿ ಹೋದರು ಅನ್ನುವ ಹಾಗೇ ಫ್ಯಾನ್ಸ್ ದುಃಖ ಪಡ್ತಿದ್ದಾರೆ ಎಂದು ಮಾತನಾಡಿದ್ದಾರೆ.
ಅಪ್ಪು ನೆನಪು ಬಂದಾಗ ಅವರ ಹೆಂಡ್ತಿ ಮತ್ತು ಮಕ್ಕಳನ್ನ ನೋಡಿದ್ರೆ ತುಂಬಾ ದುಃಖ ಆಗುತ್ತೆ. ನಮ್ಮ ಧೃತಿ ಸೇಮ್ ಅಪ್ಪು ಹಾಗೆಯೇ. ಅವಳ ನಡೆ, ನುಡಿ ಎಲ್ಲವೂ ಅಪ್ಪು ತರನೇ ಇದೆ. ಧೃತಿ ನೋಡಿಯೇ ಅಪ್ಪು ಇದ್ದಾರೆ ಅಂತ ಭಾವಿಸುತ್ತಿದ್ದೇವೆ ಎಂದು ಅಪ್ಪು ಪುತ್ರಿಯ ಬಗ್ಗೆ ಲಕ್ಷ್ಮಿ ಅವರು ಹೇಳಿದ್ದಾರೆ. ಇದನ್ನೂ ಓದಿ:ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ಅಪ್ಪುಗೆ ಇಷ್ಟ ಅಂತ ನಾನು ಇವತ್ತು ಮಸಲಾ ಚಿತ್ರಾನ್ನ ಮಾಡಿಕೊಂಡು ಬಂದಿದ್ದೇನೆ ಎಂದು ಲಾಕ್ಡೌನ್ ಸಮಯದಲ್ಲಿ ಅಪ್ಪು ಕರೆ ಮಾಡಿ ರೆಸಿಫಿ ಕೇಳಿ ಅಡುಗೆ ಮಾಡಿರೋದನ್ನ ಪುನೀತ್ ಸಹೋದರಿ ಸ್ಮರಿಸಿದ್ದಾರೆ.
ಇಂದು (ಅ.29) ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸ್ಮಾರಕಕ್ಕೆ ಪುನೀತ್ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಇಡೀ ಪುನೀತ್ ಕುಟುಂಬ ಮತ್ತು ಅಭಿಮಾನಿಗಳು ಭಾಗಿಯಾಗಿದ್ದಾರೆ.