ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ದೊಡ್ಡ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಇನ್ನೆನ್ನು ಪಂಚಮಹಾರಥೋತ್ಸವಕ್ಕೆ ಶುಭ ಮೀನ ಲಗ್ನದಲ್ಲಿ ಚಾಲನೆ ಸಿಗಬೇಕಿತ್ತು. ಆದರೆ ಆ ವೇಳೆಗಾಗಲೇ ಮಹಾರಥದ ಹಗ್ಗ ತುಂಡಾಗಿರುವುದು ಕಂಡು ಬಂದು ಬರೋಬ್ಬರಿ 3 ಗಂಟೆಗಳ ಕಾಲ ತಡವಾಗಿ ರಥೋತ್ಸಕ್ಕೆ ಚಾಲನೆ ಸಿಕ್ಕಿತ್ತು.
ನಂಜನಗೂಡು ರಥೋತ್ಸವದಲ್ಲಿ ಹಗ್ಗ ತುಂಡಾದ ಕಾರಣ ನಿಗದಿತ ಸಮಯಕ್ಕಿಂತ ತಡವಾಗಿ ರಥೋತ್ಸವ ನೆರವೇರಿದೆ. ಮಂಗಳವಾರ ಬೆಳಗ್ಗೆ 6.40ರಿಂದ 7ಗಂಟೆಯ ಮೀನ ಲಗ್ನದಲ್ಲಿ ರಥೋತ್ಸವ ಆರಂಭವಾಗಬೇಕಿತ್ತು. ರಥೋತ್ಸವಕ್ಕೂ ಮುನ್ನ ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
ರಥೋತ್ಸವ ಆರಂಭವಾಗುವ ಕೆಲವೇ ಕ್ಷಣಗಳ ಮುನ್ನ ಹಗ್ಗ ತುಂಡಾಗಿರುವುದನ್ನು ಗಮನಿಸಿದ ಭಕ್ತರು ಭಾರೀ ಅನಾಹುತವೊಂದನ್ನು ತಪ್ಪಿಸಿದ್ದರು. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ದೇಗುಲದ ಸಿಬ್ಬಂದಿ ತುಂಡಾದ ಹಗ್ಗಕ್ಕೆ ಬದಲಿ ವ್ಯವಸ್ಥೆಗೆ ಮುಂದಾದರು. ಆದರೂ ಮೂರು ಗಂಟೆಗಳ ಪ್ರಯತ್ನದಲ್ಲಿ ಮೂರು ಬಾರಿ ಹಗ್ಗ ತುಂಡಾಗಿ ರಥೋತ್ಸವ ವಿಳಂಬವಾಗಿ ನೆರವೇರಿತು.
ಪದೇ ಪದೇ ಹಗ್ಗ ತುಂಡಾದ ಹಿನ್ನಲೆಯಲ್ಲಿ ಕ್ರೇನ್ ಹಾಗೂ ಜೆಸಿಬಿ ಸಹಾಯದಿಂದ ರಥವನ್ನು ಎಳೆಯಲಾಯಿತು. ನಂತರ ಗಣಪತಿ, ಸುಬ್ರಮಣ್ಯ, ಶ್ರೀಕಂಠೇಶ್ವರ, ಪಾರ್ವತಿ, ಚಂಡೀಕೇಶ್ವರ ರಥಗಳು ಕಂಠೇಶ್ವರ ಸ್ವಾಮಿಯ ರಥದ ಹಿಂದೆ ಸಾಗಿದವು.