– ಗೋಕಾಕ್ ಕೈ ಅಭ್ಯರ್ಥಿ ನಾನೇ
ಬೆಳಗಾವಿ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮೂರು ಜನ ಅಳಿಯಂದಿರ ಮಾತು ಕೇಳಿ ಬಿಜೆಪಿ ಸೇರಿದ್ದಾರೆ. ನಮ್ಮ ತಂದೆಯಿಂದಲೂ ಜಾರಕಿಹೊಳಿ ಕುಟುಂಬದವರು ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರು. ಆದರೆ ರಮೇಶ್ ಅಳಿಯಂದಿರ ಮಾತು ಕೇಳಿ ಬಿಜೆಪಿ ಸೇರಿದ್ದಾರೆ ಎಂದು ಸಹೋದರ ಲಖನ್ ಜಾರಕಿಹೊಳಿ ಹರಿಹಾಯ್ದಿದ್ದಾರೆ.
ಜಿಲ್ಲೆಯ ಗೋಕಾಕ್ ತಾಲೂಕಿನ ಧೂಪದಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ಅಳಿಯಂದಿರ ಭ್ರಷ್ಟಾಚಾರ ಬಹಳ ಆಗಿದೆ. ಇದಕ್ಕೆ ಕಡಿವಾಣ ಹಾಕಲು ನಾನು ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸತೀಶ್, ಲಖನ್ ತಲೆ ಕೆಡಿಸುತ್ತಿದ್ದಾನೆ ಎಂಬ ರಮೇಶ್ ಜಾರಕಿಹೊಳಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದೆ ನಾನು ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧೆ ಮಾಡಲು ತಯಾರಿ ನಡೆಸಿದ್ದೆ. ಯಾರು ನಮಗೆ ತಲೆ ಕೆಡಸುತ್ತಿದ್ದಾರೆ ಎಂಬುದರ ಬಗ್ಗೆ ಮಾತನಾಡುವುದು ಬೇಡ. ರಮೇಶ್ ಬಿಜೆಪಿ ಸೇರಲು ಅವರ ಅಳಿಯಂದಿರು ತಲೆ ಕೆಡಿಸಿದ್ದಾರೆ. ನಮ್ಮ ಮಾತು ಕೇಳಿದ್ದರೆ ರಮೇಶ್ ಕಾಂಗ್ರೆಸ್ಸಿನಲ್ಲಿರುತ್ತಿದ್ದರು. ಸತೀಶ್ ಜಾರಕಿಹೊಳಿ ನನ್ನ ತಲೆ ಕೆಡಿಸಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರಿ ಒಳ್ಳೆಯದಾಗುತ್ತೆ ಎಂದು ರಮೇಶ್ಗೆ ಹೇಳಿದ್ದೆ. ಆದರೆ ನನ್ನ ಮಾತನ್ನು ಅವರು ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಳಿಯಂದಿರ ಮೇಲೆ ರಮೇಶ್ಗೆ ಬಹಳ ಪ್ರೀತಿ. ಅಳಿಯಂದಿರು ತ್ರಿ ಈಡಿಯಟ್ಸ್ ಇದ್ದ ಹಾಗೆ. ಚುನಾವಣೆ ಮಾಡುವವರೊಬ್ಬರು, ದುಡಿಯುವವರೊಬ್ಬರು ನಂತರ ಬಂದು ಮೇಯುವವರೊಬ್ಬರು. ಅಳಿಯಂದಿರ ಭ್ರಷ್ಟಾಚಾರ ಬಹಳ ಇದೆ. ಅದನ್ನ ಹೇಳಲು ಒಂದು ದಿನ ಬೇಕು. ಬ್ಲ್ಯಾಕ್ ಮೇಲ್ ಮತ್ತು ಗೂಂಡಾಗಿರಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ನಮ್ಮ ಕ್ಷೇತ್ರದ ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರನ್ನು ಬದುಕಿಸುವ ಸಲುವಾಗಿ ನಾನು ಸ್ಪರ್ಧಿಸುತ್ತಿದ್ದೇನೆ. ಅಂಬಿರಾವ್ ಪಾರ್ಟ್-2, 420 ಎಂದು ಲಖನ್ ವ್ಯಂಗ್ಯ ಮಾಡಿದ್ದಾರೆ.
ಇಂದಿನಿಂದ ಪ್ರಚಾರ ಆರಂಭಿಸಿದ್ದು, ಕಾಂಗ್ರೆಸ್ಸಿನಿಂದ ನಾನೇ ಸ್ಪರ್ಧಿಸುತ್ತಿದ್ದೇನೆ. ಎದುರಾಳಿ ಯಾರು ಆಗುತ್ತಾರೆ ಗೊತ್ತಿಲ್ಲ. ಆದರೆ ಗೋಕಾಕ್ ಅಭ್ಯರ್ಥಿ ನಾನೇ. ಈಗ ಟಾಸ್ ಆಗಿದೆ ಮ್ಯಾಚ್ ಆಮೇಲೆ ಆರಂಭವಾಗುತ್ತದೆ. ನಾನು ಬ್ಯಾಟಿಂಗ್ ತೆಗೆದುಕೊಂಡಿದ್ದೇನೆ. 25 ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿದ್ದು, ಕೈ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಗೋಕಾಕ್ ಮತದಾರರ ನಾಡಿಮಿಡಿತ ನನಗೆ ಗೊತ್ತು. ನಮ್ಮ ಭಾಗದ ಜನರಿಗೆ ಬಹಳ ಅನ್ಯಾಯ ಆಗಿದೆ ಅದನ್ನು ಸರಿಪಡಿಸಬೇಕಿದೆ. ಉಪಚುನಾವಣೆ ಐಎಎಸ್ ಪರೀಕ್ಷೆ ಇದ್ದ ಹಾಗೆ. ಪರೀಕ್ಷೆ ಆರಂಭವಾದಾಗಲೇ ಬರಬೇಕು, ಇಂದಿನಿಂದ ನಮ್ಮ ಪರೀಕ್ಷೆ ಆರಂಭವಾಗಿದೆ. ರಮೇಶ್ ಅವರ ರಾಜಕೀಯ ಗೊತ್ತು, ಹೀಗಾಗಿಯೇ ಅದಕ್ಕೆ ತಡವಾಗಿ ಕಣಕ್ಕಿಳಿದಿದ್ದೇನೆ ಎಂದು ಲಖನ್ ತಿಳಿಸಿದರು.