ಬಾಗಲಕೋಟೆಯಲ್ಲಿ ಕಾರ್ಮಿಕ ಇಲಾಖೆ ಹಣ ಗುಳುಂ – ಗುತ್ತಿಗೆ ನೌಕರನ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ

Public TV
2 Min Read
labour department bagalkot

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಹಣ ಅಕ್ರಮ ವರ್ಗಾವಣೆ ಪ್ರಕರಣ ಬೆನ್ನಲ್ಲೇ ಮತ್ತೊಂದು ಅಕ್ರಮ ಬಯಲಾಗಿದೆ. ಕಾರ್ಮಿಕ ಇಲಾಖೆಯ (Labour Department) ಹಣವನ್ನು ಗುತ್ತಿಗೆ ನೌಕರನ ವಿರುದ್ಧ ಹಣ ಡ್ರಾ ಮಾಡಿಕೊಂಡು ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ.

ಬಾಗಲಕೋಟೆ (Bagalkot) ಜಿಲ್ಲೆಯ ಕಾರ್ಮಿಕ ಇಲಾಖೆಯಲ್ಲಿ ಕಾರ್ಯನಿರ್ವಾಹಕನಾಗಿದ್ದ ದ್ಯಾವಪ್ಪ ತಳವಾರ ಹಾಗೂ ಆತನ ಸಂಬಂಧಿಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 2.83 ಕೋಟಿ ರೂ. ಹಣವನ್ನು ಫಲಾನುಭವಿಗಳ ಹೆಸರಲ್ಲಿ ಇತರೆ ಖಾತೆಗಳಿಗೆ ವರ್ಗಾಯಿಸಿ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ. ಹಣ ಲೂಟಿ ಮಾಡಿ 8 ತೊಲೆ ಚಿನ್ನಾಭರಣ, 8 ಲಕ್ಷ ಮೌಲ್ಯದ ಆಸ್ತಿ ಖರೀದಿಸಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹೆಣ್ಮಗಳೊಬ್ಬಳಿಂದ ನಮ್ಮ ವಿರುದ್ಧ ದೂರು ಬರೆಸಿದ ರಾಜ್ಯದ ಡಿಜಿಪಿ ನಾಲಾಯಕ್: ಸದನದಲ್ಲಿ ಹೆಚ್‌.ಡಿ.ರೇವಣ್ಣ ಭಾವೋದ್ವೇಗದ ಮಾತು

labour department bagalkot 1

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ 2.83 ಕೋಟಿ ರೂ. ಹಣದ ಪೈಕಿ 37 ಲಕ್ಷ ಆರೋಪಿ ದ್ಯಾವಪ್ಪ ವಾಪಸ್ ಮಾಡಿದ್ದಾನೆ. ಪೊಲೀಸರು, ಖಾತೆಯಲ್ಲಿನ 76 ಲಕ್ಷ ಪ್ರೀಜ್ ಮಾಡಿದ್ದಾರೆ. 8 ತೊಲೆ ಚಿನ್ನ, 1 ಲಕ್ಷ ರೂ. ಹಣ ಹಾಗೂ ಎಂಟು ಲಕ್ಷ ಮೌಲ್ಯದ ಜಮೀನು ಪತ್ರ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಆಗಸ್ಟ್ 2023 ರಿಂದ ಪೆಬ್ರುವರಿ 2024 ರ ಮಧ್ಯೆ ಆದ ಅವ್ಯವಹಾರ ಈಗ ಬೆಳಕಿಗೆ ಬಂದಿದೆ. ಕಟ್ಟಡ ಕಾರ್ಮಿಕರ ಮದುವೆ, ವೈದ್ಯಕೀಯ ಸಹಾಯಧನ ಫಲಾನುಭವಿಗಳ ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಳ್ಳಲಾಗಿತ್ತು. ಫಲಾನುಭವಿಗಳ ಬ್ಯಾಂಕ್ ಖಾತೆ ಬದಲು, ಬೇರೆಯವರ ಬ್ಯಾಂಕ್ ಖಾತೆ ನೀಡಿ ಖೊಟ್ಟಿ ಫಲಾನುಭವಿ ಪಟ್ಟಿ ಸಿದ್ಧಪಡಿಸುತ್ತಿದ್ದ. ನಂತರ ಕಾರ್ಮಿಕ ಅಧಿಕಾರಿಗಳ ಸಹಿ ಪಡೆಯುತ್ತಿದ್ದ. ಬೇರೆ ಖಾತೆಗಳಿಗೆ ಅನುದಾನ ಮಂಜೂರು ಮಾಡಿಸಿಕೊಂಡು. ಆ ಹಣವನ್ನು ಡ್ರಾ ಮಾಡಿಸಿಕೊಂಡು ವಂಚನೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: Valmiki Corporation Scam | ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಲಿ – ಆರ್. ಅಶೋಕ್ ಆಗ್ರಹ

37,12,837 ರೂ. ವಂಚನೆ ಹಿನ್ನೆಲೆ ಎಫ್‌ಐಆರ್ ದಾಖಲಾಗಿದೆ. ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಸಂಬಂಧಿಕರ, ಆಪ್ತರ ಖಾತೆ ಸೇರಿಸಿ 37,12,837 ರೂ. ವಂಚನೆ ಮಾಡಿರುವುದು ಗೊತ್ತಾಗಿದೆ. ತನ್ನ ಖಾತೆ ಹಾಗೂ ಸಂಬಂಧಿಕರಾದ ಭಾಗೀರಥಿ ತಳವಾರ, ಹನುಮಾನ ತಳವಾರ, ಪಲ್ಲವಿ ತಳವಾರ ಖಾತೆಗೆ ಆರೋಪಿ ಹಣ ಬಿಡುಗಡೆ ಮಾಡಿದ್ದಾನೆ. ನಂತರ ಆ ಹಣ ಪಡೆದು ಕಾರ್ಮಿಕ ಇಲಾಖೆಗೆ ಮೋಸ ಮಾಡಿದ್ದಾನೆ ಎಂದು ಉಪಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್ ದೂರಿದ್ದಾರೆ.

ದ್ಯಾವಪ್ಪ ಹಾಗೂ ಸಂಬಂಧಿಕರಾದ ಭಾಗೀರಥಿ ತಳವಾರ, ಹನುಮಾನ ತಳವಾರ, ಪಲ್ಲವಿ ತಳವಾರ ವಿರುದ್ಧ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ 2024ರ ಫೆಬ್ರುವರಿ 29 ರಂದು ಎಫ್‌ಐಆರ್ ದಾಖಲಾಗಿದೆ. ನಾಲ್ವರೂ ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ.

Share This Article