ಮಂಡ್ಯ: ಸಿದ್ದರಾಮಯ್ಯ ಅವರು ಜೆಡಿಎಸ್ ಬಗ್ಗೆ ಸಹಾನೂಭೂತಿ ಇಟ್ಟುಕೊಳ್ಳಬೇಕು. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ವಿಚಾರವಾಗಿ ಹೆಚ್ಚು ಮಾತನಾಡಬಾರದು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ಮೂಲದಿಂದ ಬೆಳೆದು ಬಂದವರು. ಸಿದ್ದರಾಮಯ್ಯ ಅವರಿಗೆ ಸಿಟ್ಟು ಜಾಸ್ತಿ, ನಮ್ಮ ಕುಮಾರಸ್ವಾಮಿ ಅವರು ಸುಮ್ಮನೆ ಇರದೇ ಜಾಡಿಸಿ ಬಿಡುತ್ತಾರೆ. ಅಣ್ಣ ತಮ್ಮಂದಿರ ಜಗಳದಂತೆ ಇಬ್ಬರ ಜಗಳ ನಡೆಯುತ್ತಲೇ ಇರುತ್ತದೆ. ಸಿದ್ದರಾಮಯ್ಯ ಒಳ್ಳೆಯ ವಾಗ್ಮಿ, ಜನಪರ ಆಡಳಿತ ಕೊಡುವ ಶಕ್ತಿ ಇರುವ ಮನುಷ್ಯ. ನಮ್ಮ ಜೆಡಿಎಸ್ ಬಗ್ಗೆ ಅವರಿಗೆ ಸಾಫ್ಟ್ ಕಾರ್ನರ್ ಇರಬೇಕು. ಉಂಡ ಮನೆ, ಬೆಳೆದ ಮನೆ ಇವೆಲ್ಲನ್ನು ನೋಡಿಕೊಳ್ಳಬೇಕು. ಹಾಗಾಗಿ ಜೆಡಿಎಸ್ ಬಗ್ಗೆ ಸಹಾನುಭೂತಿ ಇಟ್ಟುಕೊಳ್ಳಬೇಕು. ಕುಮಾರಸ್ವಾಮಿ ಅವರು ಸಿದ್ದರಾಮಯ್ಯರ ವಿಚಾರದಲ್ಲಿ ಹೆಚ್ಚಿಗೆ ಮಾತನಾಡಬಾರದು ಎಂದು ಇಬ್ಬರು ಮಾಜಿಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ
ಎರಡು ರಾಷ್ಟ್ರೀಯ ಪಕ್ಷಗಳು ದೊಂಬರಾಟದಲ್ಲಿ ಮುಳುಗೋಗಿವೆ. ಮೇ ವೇಳೆಗೆ ರಾಜ್ಯದ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಕಾಣಲಿದೆ. ಕಾಂಗ್ರೆಸ್ನಿಂದ ಬಿಜೆಪಿಗೆ 15 ಮಂದಿ ಬರುತ್ತಾರೆ ಅಂತ ಬೆಳಗಾವಿ ಸಾಹುಕಾರರು ಹೇಳುತ್ತಾರೆ. ಬಿಜೆಪಿಯಿಂದ ಕಾಂಗ್ರೆಸ್ಗೆ 25 ಮಂದಿ ಬರುತ್ತಾರೆ ಎನ್ನುವುದನ್ನು ಸಹ ನೋಡಿದ್ದೇವಿ. ಯಾರ್ಯಾರು ಯಾವ ಯಾವ ಪಕ್ಷಕ್ಕೆ ಹೋಗುತ್ತಾರೆ ಅನ್ನೋದು ಇನ್ನು 6 ತಿಂಗಳು ಗೊತ್ತಾಗಲ್ಲ. 6 ತಿಂಗಳ ಬಳಿಕ ಹೋಗುವವರು ಬರುವವರು ಗೊತ್ತಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಗುಲಾಂ ನಬಿ ಆಜಾದ್ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು
ಕಾಂಗ್ರೆಸ್, ಜೆಡಿಎಸ್ನಿಂದ ವ್ಯಾಪಾರ ಮಾಡಿಕೊಂಡು ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ವ್ಯಾಪಾರ ಮುಗಿದ ಮೇಲೆ ಏನ್ ಮಾಡುತ್ತಾರೆ ನೋಡಬೇಕು. ಮೇ ವೇಳೆಗೆ ರಾಜ್ಯದ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಕಾಣಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಬೀಳುವುದಕ್ಕೆ ಬಿಡುವುದಿಲ್ಲ. ಬಿಜೆಪಿಯವರು ಹೈಜಾಕರ್ ಸಿಸ್ಟಮ್ ಇದ್ದಂಗೆ, ಯಾರನ್ನು ಬೇಕಾದರೂ ಹೈಜಾಕ್ ಮಾಡುತ್ತಾರೆ. ಇಂಡಿಯಾದ ಜನರನ್ನೇ ಹೈಜಾಕ್ ಮಾಡಿದ್ದಾರೆ. ನರೇಂದ್ರ ಮೋದಿಗೆ ಇಂಡಿಯಾ ಜನರನ್ನು ಹೇಗೆ ಮಾರ್ಕೆಟ್ ಮಾಡಬೇಕು ಅಂತ ಫಸ್ಟ್ ಲಾಸ್ ಆಗೆ ತಿಳಿದುಕೊಂಡಿದ್ದಾರೆ. ಬಿಜೆಪಿಯಲ್ಲಿ ಒಳಗಿನಿಂದ ಒಳಗೆ ಅಲ್ಲೋಲ, ಕಲ್ಲೋಲಗಳು ನಡೆಯುತ್ತಿವೆ. ಅದನ್ನು ಮುಚ್ಚಿಕೊಳ್ಳಲು ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಏನು ಎನ್ನುವುದು ತಿಳಿಯುತ್ತದೆ. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬಾರದಿತ್ತು ಎಂದು ತಿಳಿಸಿದ್ದಾರೆ.