ಕೊಪ್ಪಳ: ಲೋಕಸಭೆ ಚುನಾವಣೆ ಬಳಿಕ ಸಿಎಂ ಕುಮಾರಸ್ವಾಮಿ ನೆಗದು ಬಿಳ್ತಾರೆ. ಮೈತ್ರಿ ಸರ್ಕಾರ ಪತನವಾಗುತ್ತೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬೇಡಾ ಅಂದ್ರು ಚುನಾವಣೆ ಮುಗಿಯುತ್ತೆ, ಚುನಾವಣೆ ಮುಗಿದ ಬಳಿಕ ಕುಮಾರಸ್ವಾಮಿ ನೆಗೆದು ಬಿದ್ದು ಹೋಗುತ್ತಾರೆ. ಮೈತ್ರಿ ಸರ್ಕಾರ ಬೀಳುತ್ತೆ ಎಂದು ಭವಿಷ್ಯ ನುಡಿದರು.
ಕೊಪ್ಪಳದಲ್ಲಿ ಬಿಜೆಪಿ ಗೆಲ್ಲಬೇಕು. ಹೀಗಾಗಿ ಕಾರ್ಯಕರ್ತರು ಚೆನ್ನಾಗಿ ಪಕ್ಷದ ಪರ ಕೆಲಸ ಮಾಡಬೇಕು. ನಾನು ನೇರವಾಗಿ ಮಾತನಾಡಿ ನಿಷ್ಠುರವಾಗಿದ್ದೇನೆ. ಮೋದಿ ಪ್ರಧಾನಿ ಆಗ್ತಾರೆ ಕೊಪ್ಪಳದಲ್ಲಿ ಸಂಗಣ್ಣ ಗೆಲ್ಲುತ್ತಾರೆ. ನಾವು ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
ಕುಮಾರಸ್ವಾಮಿ ರಾಜ್ಯಕ್ಕಲ್ಲ ಮಂಡ್ಯಕ್ಕೆ ಸಿಎಂ. ದೇವೇಗೌಡರೇ ಬರೆದಿಟ್ಟುಕೊಳ್ಳಿ ಈ ಬಾರಿ ಒಂದು ಸೀಟ್ ಕೂಡ ನೀವು ಗೆಲ್ಲಲ್ಲ. ದೇವೇಗೌಡ ಹಾಸನ ಕ್ಷೇತ್ರ ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದಕ್ಕೆ ಕಣ್ಣೀರು ಹಾಕ್ತಾರೆ. ಅವರ ಜೊತೆ ಇಡೀ ಕುಟುಂಬದವರೇ ಅಳ್ತಾರೆ. ಈ ನಾಟಕ ಬಹಳ ದಿನ ನಡೆಯಲ್ಲ. ದೇಶದ ಯೋಧರು ಅಂದರೆ ಅವರಿಗೇನು ಗೊತ್ತು. ದೇವೇಗೌಡರಿಗೆ ಅವರ ಮೊಮ್ಮಕ್ಕಳೇ ಯೋಧರು. ದೇವೇಗೌಡರ ಕುಟುಂಬಕ್ಕೂ ಯೋಧರಿಗೂ ಸಂಬಂಧವಿಲ್ಲ ಬಿಡಿ ಎಂದು ವ್ಯಂಗ್ಯವಾಡಿದರು.