ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ (Rain In Dakshina Kannada) ಮುಂದುವರಿದಿದ್ದು, ಶನಿವಾರ ರಾತ್ರಿಯಿಂದಲೂ ಗಾಳಿ ಮಳೆಯಾಗುತ್ತಿದೆ. ಹೀಗಾಗಿ ಅಲ್ಲಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು ಸಾಕಷ್ಟು ಹಾನಿಯೂ ಆಗಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ (Kukke Subramanya) ಕುಮಾರಧಾರ ಸ್ನಾನಘಟ್ಟ (Kumaradhara) ಮುಳುಗಡೆಯಾಗಿದೆ. ಘಟ್ಟ ಪ್ರದೇಶದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ.
ನದಿ ಬದಿಗೆ ಹೋಗದಂತೆ ದೇವಾಲಯದ ಭಕ್ತರಿಗೆ ಸೂಚನೆ ನೀಡಲಾಗುತ್ತಿದೆ. ಅಲ್ಲದೆ ಪೊಲೀಸರು, ಗೃಹರಕ್ಷಕ ದಳದಿಂದ ಸ್ನಾನ ಘಟ್ಟ ಬಳಿ ಕಾವಲು ಕಾಯುತ್ತಿದ್ದಾರೆ. ಕುಮಾರಧಾರ ನೀರು ಹೆಚ್ಚಳವಾಗಿ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿ ಬಂದ್ ಆಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ನೈರುತ್ಯ ಮುಂಗಾರು ಮತ್ತಷ್ಟು ಚುರುಕು – ಮುಂದಿನ 5 ದಿನ ಅಬ್ಬರದ ಮಳೆ
ಇತ್ತ ಮಂಗಳೂರಿನ ಲೇಡಿಹಿಲ್ ನ ನಾರಾಯಣ ಗುರು ಸರ್ಕಲ್ ಬಳಿ ಬೃಹತ್ ಆಲದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ. ನಿನ್ನೆ ರಾತ್ರಿ ರಸ್ತೆಯಲ್ಲಿ ಸಂಚಾರವಿಲ್ಲದ ವೇಳೆ ಮರ ಬಿದ್ದಿರೋದ್ರಿಂದ ಭಾರೀ ಅನಾಹುತ ತಪ್ಪಿದೆ. ಇಂದು ಮರ ತೆರವು ಕಾರ್ಯಾಚರಣೆ ನಡದಿದೆ.
ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಹಾಗೂ ಪುತ್ತೂರು ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ನಿರಂತರ ಮಳೆಯ ಹಿನ್ನಲೆಯಲ್ಲಿ ತಗ್ಗು ಪ್ರದೇಶದ ಅಡಿಕೆ ತೋಟಗಳು ಜಲಾವೃತಗೊಂಡಡಿವೆ. ಜುಲೈ 28ರವರೆಗೂ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
Web Stories