ಮಂಡ್ಯ: ರೈತ ಬಂಧು, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಚಿತ್ರದಲ್ಲಿಯೂ ನಟಿಸಿ ಸೈ ಎನ್ನಿಸಿಕೊಂಡಿದ್ದರು.
‘ಮಂಡ್ಯ ಸ್ಟಾರ್’ ಚಿತ್ರದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರು ನಟಿಸಿದ್ದಾರೆ. “ರೈತರಿಗೆ ಅನ್ಯಾಯ ಆದರೆ ಪ್ರಾಣ ಕೊಡೋಕು ಸಿದ್ಧ ಇದ್ದೇವೆ, ಪ್ರಾಣ ತೆಗೆಯೋಕು ಸಿದ್ಧ ಇದ್ದೇವೆ” ಎಂದು ಸಿನಿಮಾದಲ್ಲಿ ರೈತರ ಪರ ಖಡಕ್ ಡೈಲಾಗ್ ಹೊಡೆದಿದ್ದು, ಜನರ ಮನಸ್ಸು ಗೆದ್ದಿದ್ದರು. ಪರ್ವ ಎಂಆರ್ಕೆ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಲೋಕೇಶ್ ಅರ್ಚನಾ ಮತ್ತು ರಂಜಿತಾ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದರು. ಚಿತ್ರಕ್ಕೆ ಎಸ್ ಮನೋಜ್ ಸಂಗೀತ ನೀಡಿದ್ರು.
ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಭಾನುವಾರ ರಾತ್ರಿ ಕಬಡ್ಡಿ ಪಂದ್ಯ ವೀಕ್ಷಣೆ ವೇಳೆ ಹೃದಯಾಘಾತವಾಗಿ ವಿಧಿವಶರಾಗಿದ್ದಾರೆ. ರೈತರಿಗಾಗಿಯೇ ಬದುಕು ಸವೆಸಿದ ಮಾಣಿಕ್ಯವೊಂದು ಮರೆಯಾಗಿದೆ. ಮಕ್ಕಳು ವಿದೇಶದಿಂದ ಆಗಮಿಸುವ ಹಿನ್ನೆಲೆಯಲ್ಲಿ ಬುಧವಾರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕೆ.ಎಸ್ ಪುಟ್ಟಣ್ಣಯ್ಯ ಕರ್ನಾಟಕ ರೈತ ಸಂಘ ಕಂಡಂತಹ ಧೀಮಂತ ಹೋರಾಟಗಾರ. ರಾಜಕಾರಣಿಯಾಗಿದ್ದರೂ ಸರಳ ಜೀವಿಯಾಗಿ ಬದುಕನ್ನು ಸವೆಸಿದವರು. ಸ್ವತಃ ಕಬಡ್ಡಿ ಆಟಗಾರರಾಗಿದ್ದ ಪುಟ್ಟಣ್ಣಯ್ಯ ಅದನ್ನೇ ನೋಡುತ್ತಾ ಕೊನೆಯುಸಿರೆಳೆದಿದ್ದಾರೆ.
ರೈತ ಚಳವಳಿಯ ಕೊಂಡಿಯೊಂದು ಅಸ್ತಂಗತವಾಗಿದೆ. ಶಾಸಕನಾಗಿದ್ದರೂ ಸರಳಜೀವಿಯಾಗಿಯೇ ಬದುಕ ಸವೆಸಿದ ಮಾಣಿಕ್ಯವೊಂದು ನಮ್ಮನ್ನಗಲಿದೆ. ರೈತರ ಬಗ್ಗೆ ಕಾಳಜಿಯಳ್ಳವರಾಗಿದ್ದ ಪುಟ್ಟಣ್ಣಯ್ಯ, ಎಸ್.ಡಿ. ಜಯರಾಂರ ಮಾರ್ಗದರ್ಶನದಲ್ಲಿ 1983ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಪಾದಾರ್ಪಣೆ ಮಾಡಿದರು. ಬಳಿಕ ಪಾಂಡವಪುರ ತಾಲೂಕು ರೈತ ಸಂಘದ ಅಧ್ಯಕ್ಷರಾಗಿ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ಹಾಗೂ ಮೈಸೂರು ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆಯಾದ್ರು. ನಂತರ 1999 ರಿಂದ 2012ರವರೆಗೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ ದುಡಿದರು. ಬಳಿಕ `ಸರ್ವೋದಯ ಕರ್ನಾಟಕ ಪಕ್ಷ’ದಿಂದ ಪಾಂಡವಪುರ ಶಾಸಕರಾಗಿ ಆಯ್ಕೆಯಾಗಿದ್ದರು. ಇದನ್ನು ಓದಿ: ರೈತ ಮುಖಂಡ, ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ವಿಧಿವಶ- ಅಂತಿಮ ದರ್ಶನ ಪಡೆದ ನಟ ದರ್ಶನ್