ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನ ಬರುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅನುಮಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಂತೋಷ್ ಪಾಟೀಲ್ ವಿರುದ್ಧ ನ್ಯಾಯಾಲಯದ ಮೂಲಕ ನೋಟಿಸ್ ಕೊಟ್ಟಾಗ ಹೆದರಿಕೊಂಡು ಈ ರೀತಿ ಮಾಡಿಕೊಂಡಿದ್ದಾರೆ ಅಂದುಕೊಂಡಿದ್ದೆ. ಆದರೆ ಆಮೇಲೆ ನನಗೆ ಒಂದೊಂದೇ ಅಂಶ ಅನುಮಾನ ಬರುತ್ತಿದೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನ ಬರುತ್ತಿದೆ. ಕೊಲೆ ಎನ್ನುವ ಅಂಶಗಳ ಬಗ್ಗೆ ಬೇರೆ ಬೇರೆಯವರ ಜೊತೆ ಮಾತನಾಡಿದಾಗ ಅನೇಕ ಅಂಶ ಮಾತನಾಡಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ತನಿಖೆ ವರದಿ ಬರಬೇಕು ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಆ ಮೃತ ಹುಡುಗನ ಬಗ್ಗೆ ನನಗೂ ಸಹ ಒಂದು ರೀತಿಯ ಸಹಾನುಭುತಿ ಇದೆ. ಆ ಹುಡುಗನನ್ನು ಯಾರಾದರೂ ದುರುಪಯೋಗ ಮಾಡಿಕೊಂಡಿದ್ದಾರಾ ಎನ್ನುವ ಬಗ್ಗೆ ತನಿಖೆ ಆದ ನಂತರವೇ ಸತ್ಯ ಹೊರಬರಲಿದೆ ಎಂದ ಅವರು ಇಡೀ ರಾಜ್ಯದಿಂದ ಎಲ್ಲರೂ ನನಗೆ ಬೆಂಬಲ ಕೊಡುತ್ತಿದ್ದಾರೆ. ನನ್ನ ಬಗ್ಗೆ ಒಂದೇ ಒಂದು ಒಡಕು ಧ್ವನಿ ಇಲ್ಲ. ಇದರಲ್ಲಿ ನಿಮ್ಮ ಯಾವುದೇ ತಪ್ಪು ಇಲ್ಲ. ಷಡ್ಯಂತ್ರ ಇದೆ. ಈ ಷಡ್ಯಂತ್ರದಿಂದ ನೀವು ಹೊರಗೆ ಬರುತ್ತೀರಾ ಎಂಬ ಮಾತನ್ನು ಎಲ್ಲರೂ ಹೇಳುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೀರಶೈವ ಸಮಾಜದವರ ಹೋರಾಟ ವಿಚಾರವಾಗಿ ಮಾತನಾಡಿ, ವೀರಶೈವ ಸಮಾಜದ ಯಾರೋ 4 ಜನ ಫ್ಲೆಕ್ಸ್ ಹಾಕಿದ ಮಾತ್ರಕ್ಕೆ ನಾನು ಒಪ್ಪಲ್ಲ. ಈ ಬಗ್ಗೆ ನ್ಯಾಯ ಹೊರಗೆ ಬರಬೇಕು. ಯಾರೂ ತಪ್ಪು ಮಾಡಿದ್ದಾರೋ, ಆ ತಪ್ಪು ಮಾಡಿದ್ದವರು ಹೊರಗೆ ಬರಬೇಕು. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಈ ಷಡ್ಯಂತ್ರದ ರೂವಾರಿಗಳು ಯಾರು? ವ್ಯಕ್ತಿನೋ, ಸಂಸ್ಥೆನೋ, ಪಕ್ಷನೋ ಎಂಬುದು ಹೊರಗೆ ಬರಬೇಕು. ಆಗ ನಿಜಕ್ಕೂ ಆತನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸಮಾಜದವರು, ಕುಟುಂಬದವರು ಏನು ಮಾಡಬೇಕೋ ಮಾಡಲಿ ಅದು ಅವರ ಕರ್ತವ್ಯ ಎಂದರು. ಇದನ್ನೂ ಓದಿ: ಹನುಮ ಜಯಂತಿ ಹಿನ್ನೆಲೆ ಕೇಸರಿ ಶಾಲು ಧರಿಸಿ ಗಣೇಶ್ ಹುಕ್ಕೇರಿ ಪಾದಯಾತ್ರೆ
ಸಂತೋಷ್ ಅವರದ್ದು ಆತ್ಮಹತ್ಯೆಯೋ, ಕೊಲೆಯೋ ಏನು ಎಂಬುದು ಗೊತ್ತಿಲ್ಲ. ಏನು ಗೊತ್ತಿಲ್ಲದೇ ಸರ್ಕಾರ ಸಹ ಏನು ಮಾಡಲು ಸಾಧ್ಯವಿಲ್ಲ. ತನಿಖೆಯ ವರದಿ ಬಂದ ನಂತರ ಸಿಎಂ ಜೊತೆ ಮಾತನಾಡುತ್ತೇನೆ. ತನಿಖೆ ನಡೆಯುವ ಸಂದರ್ಭದಲ್ಲಿ ಇದರ ಹಿಂದೆ ಡಿಕೆಶಿ ಇದ್ದಾರೋ, ಇಲ್ಲವೋ ಎಂಬ ಬಗ್ಗೆ ಈಗಲೇ ಹೇಳಲ್ಲ. ತನಿಖೆಯ ವರದಿ ಬಂದ ನಂತರ ಡಿಕೆಶಿಯೇ ಇದರ ಹಿಂದೆ ಇದ್ದಾರೆ ಎಂದು ಗೊತ್ತಾದರೆ ಆಗ ಹೇಳ್ತೇನೆ. ತನಿಖೆಯ ವರದಿ ತಿಳಿದುಕೊಳ್ಳದೇ ಏನು ಹೇಳಲು ಇಷ್ಟಪಡಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿಂದೂ, ಮುಸ್ಲಿಮರ ಮಧ್ಯೆ ಮತ-ಭೇದ ಪ್ರಾರಂಭವಾಗೋದಕ್ಕೆ ಈ 6 ವಿದ್ಯಾರ್ಥಿನಿಯರೇ ಕಾರಣ: ರಘುಪತಿ ಭಟ್