ವಿಜಯಪುರ: ಎ.ಎಸ್ ಪಾಟೀಲ್ ನಡಹಳ್ಳಿ ಒಬ್ಬ ಪುಟಗೋಸಿ ಶಾಸಕ, ಮಂಗನಂತೆ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಹುಚ್ಚುನಾಯಿಗೂ ಜನ ಮರ್ಯಾದೆ ಕೊಡುತ್ತಾರೆ. ಆದ್ರೆ ನಡಹಳ್ಳಿಗೆ ಕೊಡಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ್ ಬಬಲೇಶ್ವರ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಶಾಸಕ ನಡಹಳ್ಳಿ ವಿರುದ್ಧ ಕಿಡಿಕಾರಿದರು. ಈ ಹಿಂದೆ ನಡಹಳ್ಳಿ ಅವರು ಕಳ್ಳ ಎತ್ತು, ಠಕ್ಕ ಎತ್ತು, ವಸೂಲಿ ಎತ್ತು ಎಂದು ಗೃಹ ಸಚಿವ ಎಂ ಬಿ ಪಾಟೀಲ್, ಆರೋಗ್ಯ ಸಚಿವ ಶೀವಾನಂದ ಪಾಟೀಲ್ ಹಾಗೂ ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ವಿರುದ್ಧ ವ್ಯಂಗ್ಯವಾಡಿದ್ದರು. ಈ ವಿಚಾರಕ್ಕೆ ಆಕ್ರೋಶಗೊಂಡಿರುವ ಕಾಂಗ್ರೆಸ್ ಮುಖಂಡರು ನಡಹಳ್ಳಿ ವಿರುದ್ಧ ವಾಕ್ಸಮರ ಮೊಳಗಿಸಿದ್ದಾರೆ. ಮನೆ ಆವರಣಕ್ಕೆ ಹುಚ್ಚು ನಾಯಿ ಬಂದರೆ ಅದಕ್ಕೂ ಜನರು ಮರ್ಯಾದೆ ಕೊಟ್ಟು ಹಚಾ.. ಹಚಾ.. ಎಂದು ಹೊರಗೆ ಓಡಿಸುತ್ತಾರೆ. ಆದ್ರೆ ದೇವರಹಿಪ್ಪರಗಿ ಜನ ನಡಹಳ್ಳಿಯನ್ನ ಹುಚ್ಚು ನಾಯಿಗಿಂತ ಕಡೆಯಾಗಿ ನಡೆಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಎಂ.ಬಿ ಪಾಟೀಲ್ ಕುರಿತು ಮಾತನಾಡುವ ನೈತಿಕತೆ ಶಾಸಕ ನಡಹಳ್ಳಿಗೆ ಇಲ್ಲ. ಹೆಂಡ ಕುಡಿದ ಮಂಗನಂತೆ ನಡಹಳ್ಳಿ ಪಕ್ಷದಿಂದ ಪಕ್ಷಕ್ಕೆ ಹಾರುತ್ತಾರೆ. ಅವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ ಎಂದು ಟಾಂಗ್ ನೀಡಿದರು.