ಬೆಂಗಳೂರು: ಅವಕಾಶ ಜನ ನಿಮಗೆ ಕೊಟ್ಟಿದ್ದಾರೆ ಕೆಲಸ ಮಾಡಿ. ಮಾಡಕ್ಕಾಗಿಲ್ಲ ಅಂದ್ರೆ ಚುನಾವಣೆಗೆ ಹೋಗೋಣ ಬನ್ನಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸವಾಲೆಸೆದಿದ್ದಾರೆ.
ಮಳೆ ಅವಾಂತರಕ್ಕೆ ಕಾಂಗ್ರೆಸ್ ಕಾಲದ ಒತ್ತುವರಿ ಕಾರಣ ಎಂಬ ಸಿಎಂ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಾಲದಲ್ಲಿ ಒತ್ತುವರಿ ಆಗಿದ್ರೆ ಇವರು ತೆರವು ಮಾಡಲಿ. ಇವರಿಗೆ ಆ ಕೆಲಸ ಮಾಡಕ್ಕಾಗದೇ ಮಾತಾಡ್ತಾರೆ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ. ಇವರಿಗೆ ಅಧಿಕಾರ ಕೊಟ್ಟಾಗ ಮಾಡಕ್ಕಾಗದೇ ಕಾಂಗ್ರೆಸ್ ನಿಂದ ಹಾಳಾಯ್ತು ಅಂತ ಹೇಳೋದಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕಾಲದಲ್ಲಿ ಏನು ಹಾಳಾಯ್ತು ಅಂತ ಹೇಳಲಿ. ನಿಮ್ಮ ಭ್ರಷ್ಟಾಚಾರ, ನಿಮ್ಮ ಸರ್ಕಾರ ಅಧಿಕಾರಿಗಳ ಭ್ರಷ್ಟಾಚಾರದಿಂದ ಹಾಳಾಗಿದೆ ಅಂತ ಸಿಎಂ ಗಮನದಲ್ಲಿಟ್ಟುಕೊಳ್ಳಲಿ. ಅವಕಾಶ ಜನ ನಿಮಗೆ ಕೊಟ್ಟಿದ್ದಾರೆ ಕೆಲಸ ಮಾಡಿ. ಮಾಡಕ್ಕಾಗಿಲ್ಲ ಅಂದ್ರೆ ಚುನಾವಣೆಗೆ ಹೋಗೋಣ ಬನ್ನಿ ಎಂದು ಚಾಲೆಂಜ್ ಹಾಕಿದರು. ಇದನ್ನೂ ಓದಿ: ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ
ಕಾಂಗ್ರೆಸ್ ಕಾಲದ ಹಗರಣಗಳನ್ನು ಬಯಲಿಗೆಳೆದು ತನಿಖೆಗೆ ಕೊಡಲು ಬಿಜೆಪಿ ನಿರ್ಧಾರ ವಿಚಾರ ಸಬಂಧ ಮಾತನಾಡಿದ ಡಿಕೆಶಿ, ಯಾಕೆ ಲೇಟ್ ಮಾಡ್ತಿದಾರೆ, ಹಗರಣಗಳನ್ನು ಬಯಲಿಗೆಳೆಯಲಿ. ಒಂದು ನಿಮಿಷವೂ ಲೇಟ್ ಮಾಡದೇ ಹಗರಣಗಳನ್ನು ಹೊರಗೆ ತಂದು ನಮ್ಮನ್ನು ಗಲ್ಲಿಗೆ ಹಾಕಲಿ. ಕೇವಲ ಖಾಲಿ ಮಾತಾಡಬೇಡಿ. ಇಂಧನ ಇಲಾಖೆ ಹಗರಣಗಳನ್ನೂ ತೆಗೆಯಲಿ. ಈಗಿನ ಸಚಿವರೂ ಮಾಡ್ತಿದ್ದಾರಲ್ಲ. ನನ್ನೊಬ್ಬನ ಮೇಲೆಯೇ ಆದಾಯ ಮೀರಿದ ಆಸ್ತಿ ಕೇಸ್ ಹಾಕಿದ್ದಾರೆ. ಇವರ್ಯಾರೂ ಆದಾಯ ಮೀರಿ ಆಸ್ತಿ ಮಾಡೇ ಇಲ್ವಾ? ಯಾರಿಗೆ ಹೇಳ್ತಿದ್ದಾರೆ ಇವರು? ಈ ಡಿಕೆಶಿ ಬಿಜೆಪಿಯವರ ಗೊಡ್ಡು ಬೆದರಿಕೆಗಳಿಗೆಲ್ಲ ಹೆದರುವ ಮಗ ಅಲ್ಲ ಎಂದು ವಾಗ್ದಾಳಿ ನಡೆಸಿದರು.