ಮೈಸೂರು: ಯಾರು ಶಾಂತಿ ಕದಲುತ್ತಿದ್ದಾರೋ ಅವರು ಇದನ್ನು ಗಮನಿಸಬೇಕು. ಕರ್ನಾಟಕದಲ್ಲಿನ ಶಾಂತಿಯ ವಿಚಾರ ಬಗ್ಗೆ ಸಿಎಂ ಅವರನ್ನು ಪ್ರಶ್ನಿಸಿ. ಕುವೆಂಪು ಅವರು ಹೇಳಿದ ರೀತಿ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಯಾರು ಸಹ ಅರ್ಜಿ ಹಾಕಿ ಹುಟ್ಟುವುದಿಲ್ಲ. ಎಲ್ಲಾ ಭಗವಂತನ ಪ್ರೇರೇಪಣೆ. ಈಗ ಮುಸ್ಲಿಂ ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲ ಎಂದು ಬಾಗಲಕೋಟೆಯಲ್ಲಿ ಮುಸ್ಲಿಂ ಮಹಿಳೆಯರು ಪರಿಹಾರದ ಹಣ ತೂರಿದ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದರು.
ಮೂರನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಪತ್ನಿ ಜೊತೆ ಡಿಕೆಶಿಯವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಇದೇ ವೇಳೆ ಸಿದ್ದರಾಮೋತ್ಸವ ವಿಚಾರ ಸಂಬಂಧ ಮಾತನಾಡಿ, ಅದು ಬರೀ ಹುಟ್ಟುಹಬ್ಬದ ವಿಚಾರ ಅಲ್ಲ. ಅದರ ಮೂಲಕ ಕಾಂಗ್ರೆಸ್ ಸರ್ಕಾರ ಆಡಳಿತ ಸಂದರ್ಭದ ಪ್ರಗತಿಗಳ ಬಗ್ಗೆ ಮೆಲುಕು ಹಾಕುತ್ತೇವೆ. ನಮ್ಮ ಆಡಳಿತ ಅವಧಿಯಲ್ಲಿ ಏನಾಗಿತ್ತು, ಈಗ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಜನರಿಗೆ ಆ ಮೂಲಕ ವಿವರಿಸುತ್ತೇವೆ. ಬಿಜೆಪಿಯವರು ವಿನಾಕಾರಣ ಇದರ ಬಗ್ಗೆ ಮಾತನಾಡುತ್ತಿದ್ದಾರೆ ಅಷ್ಟೇ ಎಂದರು. ಇದನ್ನೂ ಓದಿ: ಪಾಪ, ಅವರಿಗೆ ದುಡ್ಡು ವಾಪಸ್ ಕೊಟ್ಟು ಕಳಿಸಿದ್ದೀವಿ: ಸಿದ್ದರಾಮಯ್ಯ
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ 350ಕಿ.ಮಿ ಯಾತ್ರೆ ನಡೆಯುತ್ತದೆ. ಅದರ ರೂಪುರೇಷೆಗಳು ಈಗ ಸಿದ್ಧವಾಗುತ್ತಿವೆ. ಕೇರಳದಿಂದ ಕರ್ನಾಟಕಕ್ಕೆ ಯಾತ್ರೆ ಬರಲಿದೆ. ಅದರ ಎಲ್ಲಾ ರೂಪುರೇಷೆಗಳು ಶೀಘ್ರದಲ್ಲೇ ಅಂತಿಮವಾಗುತ್ತೆ. ಜುಲೈ19ರಂದು ಮೈಸೂರಿಗೆ ಬಂದು ಅದರ ಪೂರ್ವಾಭಾವಿ ಸಭೆಗಳನ್ನು ನಡೆಸುತ್ತೇನೆ. ಎಂದು ತಿಳಿಸಿದರು. ಇದನ್ನೂ ಓದಿ: ನಮ್ಗೆ ನ್ಯಾಯ ಬೇಕು, ದುಡ್ಡು ಬೇಡ – ಸಿದ್ದು ಕೊಟ್ಟ 2 ಲಕ್ಷ ರೂ. ಎಸೆದ ಮುಸ್ಲಿಂ ಮಹಿಳೆ
ಇದೇ ಸಂದರ್ಭದಲ್ಲಿ ಮುಂದಿನ ಸಿಎಂ ಡಿಕೆಶಿ ಎಂದು ಘೋಷಣೆ ಕೇಳಿಬಂತು. ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ವಾಪಸ್ ಹೋಗುವಾಗ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಸಿಎಂ ಡಿ.ಕೆ ಶಿವಕುಮಾರ್ ಗೆ ಜೈ ಎಂದು ಕೂಗಿದರು. ಕಾರ್ಯಕರ್ತರ ಜೊತೆ ಜೋಳ ಖರೀದಿಸಿ ಡಿಕೆಶಿ ತಿಂದರು. ವಾಪಸ್ ಮೈಸೂರು ನಗರ ಸಾರಿಗೆ ಬಸ್ ನಲ್ಲೇ ಡಿಕೆಶಿ ಬೆಟ್ಟದಿಂದ ತೆರಳಿದರು.