ನವದೆಹಲಿ: ಕೆಪಿಸಿಸಿ ಅಧ್ಯಕ್ಷ, ಕಾರ್ಯಧ್ಯಕ್ಷರ ನೇಮಕ ತೀವ್ರ ಕುತೂಹಲ ಮೂಡಿಸಿದ್ದು ಇಂದು ಕೂಡ ಎಐಸಿಸಿಯಿಂದ ಅಧಿಕೃತ ಪ್ರಕಟಣೆ ಅನುಮಾನ ಎನ್ನಲಾಗಿದೆ.
ಭಾನುವಾರ ಅಥವಾ ಸೋಮವಾರ ಅಧಿಕೃತ ಘೋಷಣೆಯಾಗುವ ಸಾಧ್ಯತೆಗಳಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಂತಿಮ ಪ್ರಕಟಣೆಗೆ ತಡೆ ಹಿಡಿದಿದ್ದು, ಅಧ್ಯಕ್ಷರ ನೇಮಕದ ಫೈಲ್ ತಮ್ಮ ಕಚೇರಿಯಲ್ಲೇ ಇರಿಸಿಕೊಂಡಿದ್ದಾರೆ. ಬಹುತೇಕ ಹೆಸರುಗಳು ಅಂತಿಮವಾದರೂ ಅಧಿಕೃತ ಘೋಷಣೆ ಮಾಡದಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆ ನಡುವೆ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಕೇರಳಕ್ಕೆ ತೆರಳಿದ್ದು, ಎಐಸಿಸಿಯಿಂದ ಅಂತಿಮ ಪ್ರಕಟಣೆ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಇಂದು ಸೋನಿಯಾ ಗಾಂಧಿ ಅಂತಿಮ ಪಟ್ಟಿಗೆ ಒಪ್ಪಿಗೆ ನೀಡಿದರೂ ಅದಕ್ಕೆ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ.ಸಿ ವೇಣುಗೋಪಾಲ್ ಸಹಿ ಕಡ್ಡಾಯವಾಗಿದೆ.
ಸದ್ಯ ಕೇರಳದಲ್ಲಿರುವ ವೇಣುಗೋಪಾಲ್ ಭಾನುವಾರ ವಾಪಸ್ ಆಗಲಿದ್ದಾರೆ. ಕೇರಳದಿಂದ ವಾಪಸ್ ಆದ ಬಳಿಕವಷ್ಟೇ ಸೋನಿಯಾ ಗಾಂಧಿ ಮಾತುಕತೆ ನಡೆಸಿದ ಬಳಿಕ ಅಂತಿಮ ಪಟ್ಟಿ ಸಹಿ ಹಾಕಿ ಘೋಷಿಸುವ ಸಾಧ್ಯತೆ ಇದೆ.