ಕೊಪ್ಪಳ: ಪೇಜಾವರ ಶ್ರೀಗಳು ಹಾಗೂ ನನ್ನ ನಡುವೆ ಉತ್ತಮ ಬಾಂಧವ್ಯ ಇತ್ತು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ಯ ಕೊಪ್ಪಳ ಭೇಟಿ ನೀಡಿದ್ದ ಅವರು ಈ ಸುದ್ದಿಗಾರರ ಜೊತೆ ಮಾತನಾಡಿ, ಪೇಜಾವರ ಶ್ರೀಗಳು ಅಸ್ತಂಗತರಾದ ಸುದ್ದಿ ಕೇಳಿ ಅಘಾತವಾಗಿದೆ. ಶ್ರೀಗಳು ಇಷ್ಟು ಬೇಗ ದೇಹ ತ್ಯಜಿಸುತ್ತಾರೆ ಅಂದುಕೊಂಡಿರಲಿಲ್ಲ. ಶ್ರೀಗಳು ಒಮ್ಮೆ 2014ರ ಲೋಕಸಭೆ ಚುನಾವಣೆ ವೇಳೆ ಹೊಸಪೇಟೆಯಲ್ಲಿ ರಸ್ತೆಯಲ್ಲೇ ಸಿಕ್ಕಿದ್ದರು. ರಸ್ತೆಯಲ್ಲೇ ಮಾತನಾಡಿ ಆಶೀರ್ವಾದ ಮಾಡಿ ಹೋಗಿದ್ದರು ಎಂದು ಹಳೆಯ ಮೆಲುಕು ಹಾಕಿದರು.
ನಾವು ಜನಪ್ರತಿನಿಧಿಗಳು, ನಮಗೆ ವಿಮಾನದಲ್ಲಿ ಪ್ರಯಾಣ ಮಾಡಲು ಕ್ಲಾಸ್ ಒನ್ ವ್ಯವಸ್ಥೆ ಟಿಕೆಟ್ ಇರುತ್ತದೆ. ವಿಮಾನದಲ್ಲಿ ಒಮ್ಮೆ ಹೋಗುವಾಗ ಶ್ರೀಗಳು ಹಿಂದೆ ಕುಳಿತ್ತಿದ್ದರು. ಆಗ ನನ್ನ ನೋಡಿ ಮಾತನಾಡಿಸಿದ ಸಂದರ್ಭದಲ್ಲಿ ನಾನು ನನ್ನ ಸೀಟಿನಲ್ಲಿ ಮುಂದೆ ಕುಳ್ಳಿರಿಸಿದ್ದೆ. ಅವರ ಸೀಟಿನಲ್ಲಿ ನಾನು ಕೂತು ಪ್ರಯಾಣ ಮಾಡಿದ್ದೆ. ನನಗೆ ಶ್ರೀಗಳು ಸದಾ ಮಾರ್ಗದರ್ಶಕರಾಗಿದ್ದರು. ಪೇಜಾವರ ಶ್ರೀಗಳು ಸಮಾಜದ ಏಳಿಗೆಗೆ ಶ್ರಮಿಸಿದವರು. ದಲಿತರ ಕೇರಿಗಳಿಗೆ ಹೋಗಿ ಸಹಪಂಕ್ತಿ ಭೋಜನ ಮಾಡಿದರು ಎಂದು ರಾಮುಲು ಹೇಳಿದರು.
ದಲಿತ ಕೇರಿಗಳಲ್ಲಿ ಪಾದಯಾತ್ರೆ ಮಾಡಿ ಜಾತಿ, ಮತ ಧರ್ಮವನ್ನು ತೊಲಗಿಸುವ ಪ್ರಯತ್ನ ಮಾಡಿದರು. ಹಿಂದೂ ಮುಸ್ಲಿಮರಲ್ಲಿ ಭಾವೈಕ್ಯತೆ ಬಿತ್ತುವ ಸಲುವಾಗಿ ಇಫ್ತಾರ್ ಕೂಟ ಮಾಡಿ, ಭಾವೈಕ್ಯತೆ ಬೆಳೆಸುವ ಕೆಲಸ ಮಾಡುತ್ತಿದ್ದರು. ಈ ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸುಮಾರು 1977 ರಲ್ಲಿ ಇಂದಿರಾಗಾಂಧಿ ವಿರುದ್ಧವೇ ಧ್ವನಿ ಎತ್ತಿದವರು ಪೇಜಾವರ ಶ್ರೀಗಳು ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬಗ್ಗೆ ಕೂಡ ಧ್ವನಿ ಎತ್ತಿದ್ದ ನಮ್ಮ ಶ್ರೀಗಳು, ಶ್ರೀ ಸಿದ್ದಗಂಗಾ, ಪಂಡಿತ್ ಪುಟ್ಟರಾಜ ಗವಾಯಿಗಳ ರೀತಿ ಪೇಜಾವರ ಶ್ರೀಗಳು ಕೂಡ ಹಿರಿಮೆಯನ್ನ ಹೊಂದಿದವರು. ಅವರ ಮಾರ್ಗದರ್ಶನದಲ್ಲಿ ನಾವು ಸದಾ ನಡೆಯಬೇಕು. ಈಗ ಅವರು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.