ಕೊಪ್ಪಳ: ಮಾಧ್ಯಮ ಲೋಕದಲ್ಲಿ ಸಾಧನೆ ಮಾಡಿದ ಪತ್ರಕರ್ತರಿಗೆ ಮೀಡಿಯಾ ಕ್ಲಬ್ ಮೊದಲ ಬಾರಿಗೆ ವಾರ್ಷಿಕ ಪ್ರಶಸ್ತಿ ನೀಡುತ್ತಿದ್ದು, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಮೊದಲ ವರ್ಷದ ಪ್ರಶಸ್ತಿಗೆ ʻಪಬ್ಲಿಕ್ ಟಿವಿʼಯ (Public TV) ಸುದ್ದಿ ನಿರೂಪಕ ಅರುಣ್ ಸಿ. ಬಡಿಗೇರ್ (Arun C Badiger) ಭಾಜನರಾಗಿದ್ದಾರೆ.
ನಗರದ ಭಾಗ್ಯನಗರ ರಸ್ತೆಯಲ್ಲಿನ ಬಾಲಾಜಿ ಫಂಕ್ಷನ್ ಹಾಲ್ನಲ್ಲಿ ಜುಲೈ 1ರ ಬೆಳಗ್ಗೆ 10 ಗಂಟೆಗೆ ʻಕೊಪ್ಪಳ ಮೀಡಿಯಾ ಕ್ಲಬ್ʼನಿಂದ (Koppala Media Club) ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ.
ಕೊಪ್ಪಳದ ಎಸ್ಎಫ್ಎಸ್ (ಐಸಿಎಸ್ಇ) ಶಾಲೆ ಪ್ರಾಂಶುಪಾಲ ಫಾದರ್ ಜಬಮಲೈ ಎ. ಸಾನ್ನಿಧ್ಯ ವಹಿಸಲಿದ್ದಾರೆ. ಸಂಯುಕ್ತ ಕರ್ನಾಟಕದ ಸಹಾಯಕ ಸಂಪಾದಕ ಶಿವಕುಮಾರ ಮೆಣಸಿನಕಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಮೈಸೂರಿನ ಕೃಪಾಕರ ಮತ್ತು ಜಿಲ್ಲಾ ವಾರ್ತಾಧಿಕಾರಿ ಡಾ.ಜಿ ಸುರೇಶ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮೀಡಿಯಾ ಕ್ಲಬ್ ಅಧ್ಯಕ್ಷ ವಿ.ಕೆ ರವೀಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಅನ್ವಿತಾ ಮಹಿಳೆಯರ, ವೃದ್ಧರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ರೇವಣಕಿ ಪ್ರಾಯೋಜಿತ ವಾರ್ಷಿಕ ಪ್ರಶಸ್ತಿ ಮೊದಲ ಬಾರಿಗೆ ಕ್ಲಬ್ ಮೂಲಕ ನೀಡಲಾಗುತ್ತಿದೆ. ಮೊದಲ ವರ್ಷದ ಪ್ರಶಸ್ತಿಗೆ ʻಪಬ್ಲಿಕ್ ಟಿವಿʼಯ ಸುದ್ದಿ ನಿರೂಪಕ ಅರುಣ್ ಸಿ. ಬಡಿಗೇರ್ ಭಾಜನರಾಗಿದ್ದಾರೆ.
ಸನ್ಮಾನ:
ಮಳೆ, ಗಾಳಿ ಹಾಗೂ ಚಳಿ ಲೆಕ್ಕಿಸದೇ ಹಲವಾರು ವರ್ಷದಿಂದ ಪತ್ರಿಕೆ ವಿತರಕರಾಗಿ ಕೆಲಸ ಮಾಡುತ್ತಿರುವ ಮೆಹಬೂಬ್ ಮನಿಯಾರ್ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗುತ್ತಿದೆ. ಜೊತೆಗೆ ಉದಯಕಾಲ ದಿನಪತ್ರಿಕೆ ಜಿಲ್ಲಾ ವರದಿಗಾರ ಬಸವರಾಜ ಕರುಗಲ್, ಕರುನಾಡು ಬೆಳಗು ಪತ್ರಿಕೆ ಸಂಪಾದಕ ಸಂತೋಷ ದೇಶಪಾಂಡೆ ಅವರನ್ನು ಸನ್ಮಾನಿಸಲಾಗುತ್ತಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕ್ಲಬ್ ಗೌರವಾಧ್ಯಕ್ಷ ಪ್ರಕಾಶ ಕಂದಕೂರ, ತೃತೀಯ ಬಹುಮಾನ ಪಡೆದ ಪ್ರಜಾವಾಣಿ ಛಾಯಾಗ್ರಾಹಕ ಭರತ್ ಕಂದಕೂರ, ಸಮಾದಾನಕರ ಬಹುಮಾನ ಪಡೆದ ಕನ್ನಡಪ್ರಭ ಹಿರಿಯ ಛಾಯಾಗ್ರಾಹಕ ನಾಭಿರಾಜ ದಸ್ತೇನವರ, ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಭಾಜನರಾಗಿರುವ ಪ್ರಜಾವಾಣಿ ಜಿಲ್ಲಾ ಹಿರಿಯ ವರದಿಗಾರ ಪ್ರಮೋದ ಕುಲಕರ್ಣಿಗೆ ಸನ್ಮಾನ ಮಾಡಲಾಗುತ್ತದೆ. ಕುಮಾರಿ ಕೃಷಿ ಹಿರೇಗೌಡರ್ ಭರತನಾಟ್ಯ ಪ್ರದರ್ಶನ ನೀಡಲಿದ್ದು, ಹಿರಿಯ ಪತ್ರಕರ್ತ ಬಸವರಾಜ ಬಿನ್ನಾಳ ಅವರು ಬರೆದ ‘ದೊಡ್ಮನೆ ದೇವರು’ ನಾಟಕ ಕೃತಿ ಲೋಕಾರ್ಪಣೆಯಾಗಲಿದೆ.