ಕೊಪ್ಪಳ: ಪೇಜಾವರ ಶ್ರೀಗಳು ಅಸ್ತಂಗತರಾಗಿರುವುದಕ್ಕೆ ಕೊಪ್ಪಳದ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಸ್ವಾಮೀಜಿ, ಪೇಜಾವರ ಮಠದ ಶ್ರೀಗಳು ವ್ಯಕ್ತಿತ್ವ ಆಧರಣಿಯ ಮತ್ತು ಅನುಕರಣಿಯವಾಗಿದೆ. ಅವರದು ಪುಟ್ಟ ದೇಹ, ದಿಟ್ಟ ಮಾತಾಗಿತ್ತು. ಮುಖದಲ್ಲಿ ಸದಾ ದೈವಿ ಕಳೆ, ಮನದಲ್ಲಿ ಸದಾ ದೇಶಪ್ರೇಮ ಇತ್ತು ಎಂದು ನೆನೆದರು.
ವಿಶ್ವೇಶತೀರ್ಥ ಶ್ರೀಪಾದರು ಜನರ ಕಣ್ಣಿಂದ ದೂರ ಆಗಿರಬಹುದು, ಮಣ್ಣಲ್ಲಿ ಮರೆಯಾಗಬಹುದು ಲಕ್ಷ ಲಕ್ಷ ಭಕ್ತರ ಹೃದಯದಿಂದ ದೂರ ಆಗುವ ವ್ಯಕ್ತಿತ್ವ ಅವರದ್ದಲ್ಲ. ಆಧ್ಯಾತ್ಮ ಚೇತನ ಅಗಲಿದ್ದು ಈ ನಾಡಿಗೆ ತುಂಬದ ಹಾನಿಯಾಗಿದೆ. ಅವರ ಆದರ್ಶಗಳು, ಆಲೋಚನೆಗಳು ನಮಗೆ ಬೆಳಕಾಗಲಿವೆ ಎಂದರು.
ಪೇಜಾವರ ಶ್ರೀಗಳು 2012ರ ಜನೇವರಿ 11ರಂದು ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಉದ್ಘಾಟನೆ ನೆರವೆರಿಸಿದ್ದರು. ಜಾತ್ರಾ ಮಹೋತ್ಸವ ನೋಡಿ ತುಂಬ ಸಂತೋಷ ಪಟ್ಟಿದ್ದರು. ನಮ್ಮ ಜಾತ್ರೆಯನ್ನು ನೋಡಿ ಪೂರಿ ಜಗನ್ನಾಥ್ ಜಾತ್ರೆಗೆ ಹೋಲಿಸಿ ನಮಗೆಲ್ಲ ಮಾರ್ಗದರ್ಶನ ಮಾಡಿದ್ದರು. ನಮ್ಮೆಲ್ಲರಿಗೂ ಸಂತೋಷ ಪಡುವ ಮಾತನಾಡಿ ನಮಗೆಲ್ಲ ಹುರಿದುಂಬಿಸಿದ್ದು ಇನ್ನೂ ಸ್ಮರಣೆಯಲ್ಲಿದೆ ಎಂದು ನೆನೆದರು.