ಚಾಮರಾಜನಗರ: ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಸಿಂಗನಲ್ಲೂರು ಗ್ರಾಮದ ಜನರು ವಿಚಿತ್ರ ಜ್ವರದಿಂದ ಬಳಲುತ್ತಿದ್ದು, ಡೆಂಗ್ಯೂ ಶಂಕೆ ವ್ಯಕ್ತವಾಗಿದೆ. ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಾಗರ್ ಎಂಬ ಯುವಕ ಸಾವನ್ನಪ್ಪಿದ್ದಾನೆ.
ಗ್ರಾಮದ ಜನತೆ ವಿಚಿತ್ರ ಜ್ವರದಿಂದ ಬಳಲುತ್ತಿದ್ದಾರೆ. ಸುಮಾರು 150 ರಿಂದ 200 ಜನ ವಿಚಿತ್ರ ಜ್ವರಕ್ಕೆ ಒಳಗಾಗಿದ್ದು, ಸೂಕ್ತ ಚಿಕಿತ್ಸೆ ದೊರಕದೆ ನರಳುತ್ತಿದ್ದಾರೆ. ಇಡೀ ಗ್ರಾಮವೇ ಜ್ವರದಿಂದ ಬಳಲುತ್ತಿದ್ದರೂ ಸಹ ಆರೋಗ್ಯಾಧಿಕಾರಿಗಳಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ರೋಗಿಗಳ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಕೂಡಲೇ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡದಿದ್ರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ತೀವ್ರ ಜ್ವರದಿಂದ ಬಳಲುತ್ತಿರುವ ರೋಗಿಗಳನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ರೋಗಿಗಳು ಊರಿನಲ್ಲೆ ಇದ್ದು ಸೂಕ್ತ ಚಿಕಿತ್ಸೆಗೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
ವಿಚಿತ್ರ ಜ್ವರಕ್ಕೆ ಮೊದಲ ಬಲಿಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಾಗರ್ ಎಂಬ ಯುವಕ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗೆ ಸಾವನ್ನಪ್ಪಿದ್ದಾನೆ. ಗ್ರಾಮದಲ್ಲಿ ಇದೀಗ ಭಯದ ವಾತಾವರಣ ನಿರ್ಮಾಣವಾಗಿದ್ದು, ಆರೋಗ್ಯ ಇಲಾಖೆ ಇನ್ನಾದ್ರೂ ಎಚ್ಚೆತ್ತು ಸೂಕ್ತ ಚಿಕಿತ್ಸೆಗೆ ಮುಂದಾಗಬೇಕಿದೆ.