ಕೋಲ್ಕತ್ತಾ: ಶಾಲಾ ಬಸ್ಸಿನಲ್ಲಿ ಹುಡುಗಿ ಪಕ್ಕ ಕುಳಿತುಕೊಳ್ಳುವ ವಿಷಯಕ್ಕೆ ಸಂಬಂಧಿಸಿ ಆರಂಭವಾದ ಜಗಳ ಮಾರಣಾಂತಿಕ ದಾಳಿಯಲ್ಲಿ ಕೊನೆಗೊಂಡ ಘಟನೆ ಪಶ್ಚಿಮ ಬಂಗಾಳದ ಡಂಡಂ ನಗರದಲ್ಲಿ ನಡೆದಿದೆ.
11ನೇ ತರಗತಿಯ ವಿನಯ್(ಹೆಸರು ಬದಲಾಯಿಸಲಾಗಿದೆ) ದಾಳಿಗೊಳಗಾದ ಬಾಲಕನಾಗಿದ್ದಾನೆ. ವಿಕ್ರಮ್(ಹೆಸರು ಬದಲಾಯಿಸಲಾಗಿದೆ) ಎನ್ನುವ 12ನೇ ತರಗತಿಯ ವಿದ್ಯಾರ್ಥಿಯು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇವರಿಬ್ಬರೂ ಡಂಡಂ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ. ಕೇವಲ ಬಸ್ಸಿನಲ್ಲಿ ಹುಡುಗಿ ಪಕ್ಕದಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಜಗಳ ನಡೆದು, ವಿಕೋಪಕ್ಕೆ ತಿರುಗಿ ಮಾರಣಾಂತಿಕ ಹಲ್ಲೆ ನಡೆದಿದೆ.
ಘಟನೆಯಿಂದ ವಿನಯ್ ನ ಕತ್ತು ಹಾಗೂ ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಡಂಡಂ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವಿನಯ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಆರೋಪಿ ವಿಕ್ರಮ್ ನನ್ನು ಸೋಮವಾರ ಸಂಜೆ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಏನಿದು ಗಲಾಟೆ?
ಸೋಮವಾರ ಸಂಜೆ ಸುಮಾರು 4.45 ರಷ್ಟೊತ್ತಿಗೆ ಶಾಲಾ ಮಕ್ಕಳು ಶಾಲಾ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ವಿನಯ್ ಹುಡುಗಿ ಪಕ್ಕ ಕುಳಿತಿದ್ದ. ಅಷ್ಟರಲ್ಲಿ ಬಸ್ಸನ್ನೇರಿದ ವಿಕ್ರಮ್ ನನ್ನ ಗೆಳತಿಯ ಪಕ್ಕದಿಂದ ಎದ್ದೇಳು ಎಂದು ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಜಗಳ ತಾರಕ್ಕೇರಿದಾಗ, ಅಲ್ಲೇ ಇದ್ದ ವಿದ್ಯಾರ್ಥಿಗಳು ಅವರಿಬ್ಬರನ್ನು ಸಮಾಧಾನ ಪಡಿಸಲು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ.
ಇದರಿಂದ ಸಿಟ್ಟಿಗೆದ್ದ ವಿಕ್ರಮ್ ಬಸ್ ನಿಂದ ಕೆಳಗಿಳಿದು ರಸ್ತೆ ಬದಿಯ ಅಂಗಡಿಯಲ್ಲಿದ್ದ ಪೀಲರ್ (ಆಲೂಗಡ್ಡೆ ಸುಲಿಯುವ ಸಾಧನ)ವನ್ನು ಎತ್ತಿಕೊಂಡು ಬಸ್ ಏರಿದ್ದಾನೆ. ಕೈಗೆ ಸಿಕ್ಕ ಪೀಲರ್ ನಿಂದ ವಿನಯ್ ಮೇಲೆ ಮನಬಂದಂತೆ ದಾಳಿ ಮಾಡಿದ್ದಾನೆ. ಆತನ ಕ್ರೌರ್ಯಕ್ಕೆ ಬೆಚ್ಚಿದ ಬಸ್ ಚಾಲಕ, ಸಹಾಯಕ ಮತ್ತು ಇತರ ವಿದ್ಯಾರ್ಥಿಗಳು ಆರೋಪಿ ಬಾಲಕನನ್ನು ತಡೆದು ಬಸ್ನಿಂದ ಕೆಳಗಡೆ ಇಳಿಸಿದ್ದಾರೆ.