ಕೋಲ್ಕತ್ತಾ: ದೀಪಾವಳಿ ಸಮಯದಲ್ಲಿ ಮಕ್ಕಳಿಗೆ ಪಟಾಕಿ ಸಿಡಿಸುವುದು ಎಂದರೆ ಅಚ್ಚುಮೆಚ್ಚು. ಆದರೆ ಕೋಲ್ಕತ್ತಾದಲ್ಲಿ ಈ ಪಟಾಕಿಯೇ ಐದು ವರ್ಷದ ಮಗುವನ್ನು ಬಲಿಪಡೆದಿದೆ.
ಕೋಲ್ಕಾತ್ತಾದ ನಗರದ ದಕ್ಷಿಣ ಭಾಗದಲ್ಲಿರುವ ಹರಿದೇವನಪುರ ಎಂಬ ಪ್ರದೇಶದಲ್ಲಿ ಮನೆಯವರ ಜೊತೆ ಪಟಾಕಿ ಸಿಡಿಸುತ್ತಿದ್ದ 5 ವರ್ಷದ ಅದಿದಾಸ್ ಹೂಕುಂಡ ಸ್ಫೋಟಗೊಂಡ ಕಾರಣ ಭಾನುವಾರ ಸಂಜೆ ಸಾವನ್ನಪ್ಪಿದ್ದಾನೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಬಾಲಕ ಅದಿ ದೀಪವಾಳಿ ಹಬ್ಬದ ಪ್ರಯಕ್ತ ಭಾನುವಾರ ಸಂಜೆ ಮನೆಯವರ ಜೊತೆ ಸೇರಿಕೊಂಡು ಪಟಾಕಿ ಹೊಡೆಯುತ್ತಿದ್ದ. ಈ ವೇಳೆ ಪಕ್ಕದಲ್ಲಿ ಯಾರೋ ಹೊಡೆದು ಇಟ್ಟಿದ್ದ ಹೂಕುಂಡ ಬ್ಲಾಸ್ಟ್ ಆಗಿ ಬಾಲಕನ ಕುತ್ತಿಗೆಗೆ ತೀವ್ರವಾಗಿ ಗಾಯವಾಗಿತ್ತು ಎಂದು ಹೇಳಿದ್ದಾರೆ.
ಕುತ್ತಿಗೆಯ ಭಾಗಕ್ಕೆ ಪಟಾಕಿಯ ತುಣುಕುಗಳು ತಗುಲಿದ ಕಾರಣ ರಕ್ತಸ್ರಾವವಾಗಿ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ನಂತರ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ವೈದ್ಯರು ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಈ ಸಂಬಂಧ ಹರಿದೇವನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.