ಕೋಲಾರ: ವಿಶ್ವ ವಿಖ್ಯಾತಿ ಪಡೆದ ಜಿಲ್ಲೆಯ ಕೋಟಿಶಿವಲಿಂಗ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಸಾಂಭ ಶಿವಮೂರ್ತಿ(74) ಸ್ವಾಮೀಜಿ ಶುಕ್ರವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ದೈವಾಧೀನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ನಿಶ್ಯಕ್ತಿಯಿಂದ ಬಳಲುತ್ತಿದ್ದ ಶ್ರೀಗಳಿಗೆ ಗುರುವಾರ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೋಲಾರ ಕೆಜಿಎಫ್ ತಾಲೂಕಿನ ಬೇತಮಂಗಲ ಹೋಬಳಿಯ ಕಮ್ಮಸಂದ್ರದಲ್ಲಿ ಇಂದು ಲಕ್ಷಾಂತರ ಭಕ್ತರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಹೀಗಾಗಿ ರಾಜ್ಯ ಅಲ್ಲದೇ ಹೊರ ರಾಜ್ಯಗಳಿಂದಲೂ ಅಪಾರ ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಬೆಮೆಲ್ ಉದ್ಯೋಗ ತೊರೆದು 1979 ರಲ್ಲಿ ಆಧ್ಯಾತ್ಮದತ್ತ ಮುಖ ಮಾಡಿದ್ದ ಶ್ರೀಗಳು ಕೋಲಾರದಲ್ಲಿ ಕೋಟಿ ಶಿವಲಿಂಗಗಳ ಸ್ಥಾಪನೆಗೆ ಮುಂದಾಗಿ, ವಿಶ್ವದಲ್ಲೇ ಎತ್ತರದ 108 ಅಡಿ ಲಿಂಗ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಂದಿನಿಂದ ಗೋಪಲಾಪ್ಪನವರ ಸಾಂಭಶಿವ ಮೂರ್ತಿಗಳಾಗಿ ಪ್ರಪಂಚ ಪ್ರಸಿದ್ಧಿ ಪಡೆದು ಪ್ರತಿನಿತ್ಯ ಸಾವಿರಾರು ಭಕ್ತರು, ಪ್ರವಾಸಿಗರ ಆಕರ್ಷಣೀಯ ಆಧ್ಯಾತ್ಮ ಕ್ಷೇತ್ರವನ್ನಾಗಿ ಮಾಡಿದ್ದರು.
ಸಾಮೀಜಿಯವರು 1947 ಆಗಸ್ಟ್ 23 ರಂದು ಜನಿಸಿದ್ದು, ಪತ್ನಿ ರುಕ್ಮಿಣಿ, ಮಗ ಶಿವ ಪ್ರಸಾದ್, ಮಗಳು ಅನುರಾಧರನ್ನ ಅಗಲಿದ್ದಾರೆ. ಕೋಟಿಶಿವಲಿಂಗ ಕ್ಷೇತ್ರದ ಮುಕ್ತಿ ಮಂದಿರದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನಡೆಸಲು ಕುಟುಂಬ ವರ್ಗ ನಿರ್ಧರಿಸಿದ್ದು, ಬಲಿಜ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಮಗ ಶಿವಪ್ರಸಾದ್ ನೆರವೇರಿಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv