ನವದೆಹಲಿ: ಐಪಿಎಲ್ ಟೈಟಲ್ ಗೆಲುವಿನ ಬಗ್ಗೆ ತಮ್ಮನ್ನು ವಿಶ್ಲೇಷಣೆ ಮಾಡಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿಕೆಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿ ಟಾಂಗ್ ನೀಡಿದ್ದಾರೆ.
ಕೆಲವರು ಮನೆಯಲ್ಲಿಯೇ ಕೂತು ಕ್ರಿಕೆಟ್ ಬಗ್ಗೆ ತಿಳಿಯದವರಂತೆ ಮಾತನಾಡುತ್ತಾರೆ. ನಾನು ಕೂಡ ಟೈಟಲ್ ಗೆಲ್ಲಬೇಕೆಂದೇ ಬಯಸುತ್ತೇನೆ. ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ. ಆದರೆ ಐಪಿಎಲ್ ಟೈಟಲ್ ಗೆದ್ದ ಮಾತ್ರಕ್ಕೆ ಯಾವುದೇ ಆಟಗಾರನ ಸಾಮಥ್ರ್ಯದ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ. ನನ್ನಿಂದ ಸಾಧ್ಯವಾದಷ್ಟು ಟೈಟಲ್ ಗೆಲುವಿಗೆ ಶ್ರಮಿಸುತ್ತೇನೆ. ಕೆಲವು ಬಾರಿ ಅದು ಸಾಧ್ಯವಾಗುವುದಿಲ್ಲ. ಅಂದ ಮಾತ್ರಕ್ಕೆ ನನ್ನ ಬಗ್ಗೆ ಕೆಲವರು ಹೊರಗಡೆ ಕೂತು ಮಾತನಾಡುತ್ತಿದ್ದಾರೆ ಎಂದು ಗಂಭೀರ್ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನಮ್ಮ ತಂಡ 6 ಬಾರಿ ಟೂರ್ನಿಯಲ್ಲಿ ಸೆಮಿ ಫೈನಲ್ ವರೆಗೂ ಪ್ರವೇಶ ಮಾಡಿದೆ. ಆದರೆ ಕೆಲ ತಪ್ಪುಗಳಿಂದ ಟೈಟಲ್ ಗೆಲ್ಲುವ ಅವಕಾಶವನ್ನು ಮಿಸ್ ಮಾಡಿತ್ತು. ಆದರೆ ನಾವು ಮತ್ತಷ್ಟು ಸಿದ್ಧತೆ ನಡೆಸಿ ಈ ಹಿಂದಿನ ತಪ್ಪುಗಳು ನಡೆಯದಂತೆ ಮುನ್ನಡೆಯುತ್ತೇವೆ. ಉತ್ತಮ ನಿರ್ಧಾರಗಳನ್ನು ಕೈಗೊಂಡರೆ ಹಿಂದಿನ ಪ್ರದರ್ಶನಕ್ಕಿಂತಲೂ ಉತ್ತಮ ಆಟ ಆಡುತ್ತೆವೆ ಎಂದು ಟೈಟಲ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗಂಭೀರ್ ಏನ್ ಹೇಳಿದ್ದರು..?
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಗಂಭೀರ್, ಆರ್ ಸಿಬಿ ಐಪಿಎಲ್ ಟೈಟಲ್ ಗೆಲ್ಲದಿರುವ ಬಗ್ಗೆ ಕೊಹ್ಲಿರನ್ನ ಮಾತ್ರವೇ ಹೊಣೆ ಮಾಡುವುದು ಸರಿ ಅಲ್ಲ. ಧೋನಿ, ರೋಹಿತ್ ಶರ್ಮಾ ತಲಾ 3 ಬಾರಿ ತಂಡವನ್ನು ಟೈಟಲ್ ಗೆಲುವಿನವರೆಗೂ ಕೊಂಡೊಯ್ದಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಹ್ಲಿರನ್ನು ಅವರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಆದರೆ ಕಳೆದ ಏಳೆಂಟು ವರ್ಷದಿಂದ ಆರ್ ಸಿಬಿ ಕಪ್ ಗೆಲ್ಲದಿದ್ದರು ಕೂಡ ತಂಡದ ಫ್ರಾಂಚೈಸಿ ಕೊಹ್ಲಿರನ್ನೇ ನಾಯಕನಾಗಿ ಮುಂದುವರಿಸುವುದು ಅವರ ಅದೃಷ್ಟ. ಇದಕ್ಕೆ ಕೊಹ್ಲಿ ತಂಡಕ್ಕೆ ಧನ್ಯವಾದ ತಿಳಿಸಬೇಕೆಂದಿದ್ದರು.
12ನೇ ಅವೃತ್ತಿಯ ಐಪಿಎಲ್ ಟೂರ್ನಿ ಇಂದಿನಿಂದ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಆರ್ ಸಿಬಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.