ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ನಗರದಲ್ಲಿ ಇಂದು ಇಂದಿರಾ ಕ್ಯಾಂಟೀನ್ ಅನ್ನು ಟೇಪ್ ಕತ್ತರಿಸುವ ಮೂಲಕ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯನವರು ಉದ್ಘಾಟಿಸಿದರು.
ಮಾಜಿ ಮುಖ್ಯಮುಂತ್ರಿ ಸಿದ್ದರಾಮಯ್ಯ ಅವರ ಸಮಯದಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಅರಂಭವಾಗಿದ್ದು, ಇದೀಗ ಬಿಜೆಯ ಭದ್ರಕೋಟೆಯಾದ ಕೊಡಗು ಜಿಲ್ಲೆಯಲ್ಲಿಯೂ ಅರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿರಾಜಪೇಟೆ ಬಳಿಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಅರಂಭಗೊಂಡಿರುವ ನೂತನ ಕ್ಯಾಂಟೀನ್ಗೆ ಮಡಿಕೇರಿ ಎಂಎಲ್ಸಿ ವೀಣಾ ಅಚ್ಚಯ್ಯ ಅವರು ಚಾಲನೆ ನೀಡಿದರು.
ಈ ವೇಳೆ ಮಾತಾನಾಡಿದ ಅವರು, ಈ ಒಳ್ಳೆಯ ಯೋಜನೆ ಜನರಿಗೆ ಉಪಯೋಗವಾಗಲಿ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಈ ಕ್ಯಾಂಟೀನ್ ಆರಂಭಿಸಲಾಗಿದೆ. ಆದರೆ ಈಗಾಗಲೇ ನಾನು ಕೆಲವು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇದರ ಹೆಸರನ್ನು ಬದಲಾವಣೆ ಮಾಡಬೇಕು ಎನ್ನುವ ಪಿತೂರಿ ಕೂಡಾ ನಡೆಯುತ್ತಿದೆ ಅದು ಆಗಬಾರದು. ಏಕೆಂದರೆ ಅನೇಕ ಯೋಜನೆಗಳು ಬಂದು ಹೋಗುತ್ತೆ. ಆದರೆ ಆ ಯೋಜನೆಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೇ ವಿನಃ ಆ ಯೋಜನೆಗಳನ್ನೇ ಬದಲಾವಣೆ ಮಾಡಬಾರದು. ಅವರಿಗೂ ಬೇಕಾದಷ್ಟು ಯೋಜನೆಗಳನ್ನು ಮಾಡುವ ಅವಕಾಶವಿದೆ ಅದನ್ನು ಮಾಡಲಿ. ವಿರಾಜಪೇಟೆ ಸುತ್ತಮುತ್ತಲಿನ ಜನರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಪ್ರಯಾಣಿಕರಿಗೆ ಎಲ್ಲರಿಗೂ ಉಪಯೋಗವಾಗಲಿ. ಸರ್ವರಿಗೂ ಉಪಯೋಗವಾಗುವ ಹಾಗೇ ಇಲ್ಲಿನ ಶುಚಿತ್ವ ಕಾಪಾಡಿಕೊಂಡು ಹೋಗಲಿ ಎಂದರು.