ಮಡಿಕೇರಿ: ಜಲ ಪ್ರಳಯಕ್ಕೆ ಕೊಡಗು ಜಿಲ್ಲೆಯ ಜನ ನಲುಗಿ ಹೋಗಿದ್ದು, ಮತ್ತೆ ಬದುಕನ್ನು ಕಟ್ಟಿಕೊಳ್ಳಲು ಜನತೆ ಮುಂದಾಗುತ್ತಿದ್ದಾರೆ. ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ಮುರಿದು ಬಿದ್ದಿರುವ ಮನೆ, ನೆಲಸಮಗೊಂಡಿರುವ ಅಂಗಡಿ ಮುಂಗಟ್ಟುಗಳು, ಇದೀಗ ಅವಶೇಷಗಳಂತೆ ಗೋಚರಿಸುತ್ತಿದೆ.
ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡವರಿಗೆ ಆಶ್ರಯ ತಾಣವಾಗಿದ್ದ ಕಾಳಜಿ ಕೇಂದ್ರಗಳಿಂದ ಹೊರ ಬರುತ್ತಿರುವ ಸಂತ್ರಸ್ತರು ತಮ್ಮ ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ. ಜಲಪ್ರಳಯ ಕಸಿದುಕೊಂಡಿರುವ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಹಂಬಲ ಹೊಂದಿದ್ದು, ತಮ್ಮ ಅಕ್ಕಪಕ್ಕದವರ ನೆರವಿನೊಂದಿಗೆ ಮನೆ, ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಜಿಲ್ಲಾಡಳಿತ ಸದ್ಯಕ್ಕೆ ಈ ಗ್ರಾಮದಲ್ಲಿ ವಾಸಕ್ಕೆ ಯೋಗ್ಯವಿಲ್ಲ ಎಂದು ಹೇಳಿದ್ದಾರೆ. ಜಿಲ್ಲಾಡಳಿತದ ಮಾತು ಕೇಳಿ ಗ್ರಾಮಸ್ಥರು ಆಂತಕದಲ್ಲಿ ಇದ್ದಾರೆ. ಶಾಲೆಗಳಲ್ಲಿ ಇದೀಗ ಆಶ್ರಯ ನೀಡಿದ್ದಾರೆ. ಆದರೆ ಎಷ್ಟು ದಿನ ಇಲ್ಲಿ ಇರುವುದಕ್ಕೆ ಸಾಧ್ಯ, ತಮಗೆ ವಾಸಕ್ಕೆ ಯೋಗ್ಯವಾದ ಮನೆಗಳನ್ನು ಆದಷ್ಟು ಬೇಗ ಮಾಡಿಕೊಡುವಂತೆ ಸಂತ್ರಸ್ತರು ಹೇಳುತ್ತಿದ್ದಾರೆ.
ಅಲ್ಲದೆ ಇದೇ ಗ್ರಾಮದಲ್ಲಿ ಮಳೆಯಲ್ಲಿ ಮೃತಪಟ್ಟ ಕುಂಞಣ್ಣ(68) ಅವರ ಮಗ ಸಂತೋಷ್ ಎಂಬವರು ಮಳೆಯ ಸಮಯದಲ್ಲಿ ಊರಿನವರ ರಕ್ಷಣೆ ಹೋಗಿ ಅನೇಕರ ಜೀವ ಉಳಿಸಿದ್ದರು. ಆದರೆ ಅವರಿಗೆ ತಮ್ಮ ತಂದೆಯ ಜೀವ ಉಳಿಸಲು ಸಾಧ್ಯವಾಗಲಿಲ್ಲ. ತಂದೆ ಮನೆಯಲ್ಲಿ ಇರುವುದು ನಮಗೆ ತಿಳಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.