ಮಡಿಕೇರಿ: ಭಾರೀ ಮಳೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಗೋಡೆ ಕುಸಿಯುವ ಸಾಧ್ಯತೆ ಇರುವುದರಿಂದ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ರಸ್ತೆ ಬದಿಯ ತಡೆಗೋಡೆ ಕುಸಿದದ್ದೇ ಆದಲ್ಲಿ ಹೆದ್ದಾರಿ ಸಂಪೂರ್ಣ ಬಂದ್ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆ ತಡರಾತ್ರಿ ಅಧಿಕಾರಿಗಳ ಸಲಹೆ ಮೇಲೆ ದಿಢೀರ್ ಆಗಿ ಮಡಿಕೇರಿಯ ಟೋಲ್ಗೇಟ್ ಬಳಿಯೇ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.
ಈ ವರ್ಷ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿತ್ತು. ತಡೆಗೋಡೆಗೆ ಹಾಕಿದ್ದ ಸ್ಲ್ಯಾಬ್ಗಳು ಉಬ್ಬಿ ಬೀಳುವ ಆತಂಕ ಈಗ ಎದುರಾಗಿದೆ. ಇದನ್ನೂ ಓದಿ: ಭಾರೀ ಗಾಳಿ ಮಳೆಗೆ ಇಬ್ಬರು ಬಲಿ – ಮೀನು ಹಿಡಿಯಲು ಹೋದವರು ನೀರುಪಾಲು
ತಡೆಗೋಡೆಗೆ ಉಬ್ಬಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ರಂಧ್ರವನ್ನು ಕೊರೆಸಿದ್ದರು. ರಂದ್ರ ಕೊರೆದ ಬಳಿಕ ಮತ್ತಷ್ಟು ಆತಂಕ ಹೆಚ್ಚಾಗಿದ್ದು ಕುಸಿತದ ಭೀತಿ ಎದುರಾಗಿದೆ.
ಪರ್ಯಾಯವಾಗಿ ಮಡಿಕೇರಿ ಮೇಕೇರಿ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದಿಢೀರ್ ಬಂದ್ ಮಾಡಿದ್ದರಿಂದ ಸಣ್ಣ ರಸ್ತೆಯಲ್ಲಿ ಸಾಗಲು ಬೃಹತ್ ವಾಹನಗಳು ಪರದಾಡುತ್ತಿವೆ. ಸ್ಥಳದಲ್ಲೇ ಪೊಲೀಸ್ ಅಧಿಕಾರಿಗಳು ಮತ್ತು ಹೆದ್ದಾರಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.