ಕೊಡಗು: 10 ವರ್ಷದ ಹಿಂದೆ ಜೀತ ಮುಕ್ತರಾಗಿದ್ದರು ಕೂಡ 140 ಆದಿವಾಸಿ ಕುಟುಂಬಗಳು ವಾಸಿಸಲು ಮನೆಯಿಲ್ಲದೇ ಪರದಾಡುತ್ತಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಬೇತು ಗ್ರಾಮದ ಜನರ ಬದುಕು ಕರುಣಾಜನಕ ಸ್ಥಿತಿ ತಲುಪಿದೆ. ಕಾಫಿ ಎಸ್ಟೇಟ್ಗಳಲ್ಲಿ ಜೀತದಾಳಾಗಿ ದುಡಿಯುತ್ತಿದ್ದವರು ಕಳೆದ ಹತ್ತು ವರ್ಷಗಳ ಹಿಂದೆ ಬಂಧಮುಕ್ತರಾಗಿ ನೆಮ್ಮದಿಯ ಬದುಕಿನ ಕನಸು ಹೊತ್ತು ಬಂದಿದ್ದರು. ನಮಗೂ ಒಂದು ಸ್ವಂತ ಸೂರು ಸಿಗುತ್ತೆ ಅಂತ ಬೇತು ಗ್ರಾಮದ ಸರ್ಕಾರಿ ಪೈಸಾರಿಯಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು.
ಇದೂವರೆಗೆ ಸರ್ಕಾರ, ಜಿಲ್ಲಾಡಳಿತ ಮನೆ ನಿರ್ಮಿಸಿಕೊಟ್ಟಿಲ್ಲ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಜನರೇ ಮನೆ ಮುಂದೇ ಆಳವಾದ ಗುಂಡಿಗಳನ್ನು ತೋಡಿ ಬಾವಿ ಮಾಡಿಕೊಂಡಿದ್ದಾರೆ. ಅದಕ್ಕೆ ಯಾವ ತಡೆಗೋಡೆಯೂ ಇಲ್ಲ. ಹಸುಗೂಸುಗಳಿದ್ದು, ಕಣ್ಣು ಮಿಟುಕಿಸುವಷ್ಟು ಮಿಸ್ ಆದರು ಅವರ ಬದುಕೇ ಅಲ್ಲಿಗೆ ಕ್ಲೋಸ್ ಆಗಿ ಬಿಡುತ್ತೆ. ಜೀತದಿಂದ ಮುಕ್ತರಾಗಿದ್ದೇವೆ. ಇನ್ಮುಂದೆ ನಮಗೂ ಸ್ವತಂತ್ರದ ಬದುಕು ಇದೆ ಎಂದುಕೊಂಡು ಬಂದಿದ್ದ ಇವರಿಗೆ ಪ್ರತೀ ವರ್ಷ ಮಳೆ ಬಂದು ಕಾವೇರಿ ನದಿ ತುಂಬಿದರೆ ಸಾಕು ಗ್ರಾಮಕ್ಕೆ ಸಂಪರ್ಕ ಕಡಿತವಾಗಿಬಿಡುತ್ತೆ.
ಇಡೀ ಮನೆಗಳೆಲ್ಲವೂ ನೀರಿನಿಂದ ಆವೃತವಾಗಿ ಬಿಡುತ್ತವೆ. ನಮ್ಮ ಬದುಕು ಏನೋ ಮುಗಿದು ಹೋಗುತ್ತಿದೆ. ನಮ್ಮ ಮಕ್ಕಳ ಬದುಕು ಹೇಗೆ ಸ್ವಾಮಿ ಎಂದು ಸಂಕಟಪಡುತ್ತಿದ್ದಾರೆ. ಅದರಲ್ಲೂ ಈ ಬಾರಿ ಕಾವೇರಿ ನದಿ ಪ್ರವಾಹ ಬಂದಾಗ ಹಲವು ಮನೆಗಳು ನೆಲಸಮವಾಗಿವೆ. ಅವರಿಗೆ ಕೇವಲ ತಾತ್ಕಾಲಿಕ ಪರಿಹಾರ 10 ಸಾವಿರ ಕೊಟ್ಟಿದ್ದು ಬಿಟ್ಟರೆ ಮನೆಗೆ ದಾಖಲೆ ಇಲ್ಲ ಎನ್ನೋ ಕಾರಣಕ್ಕೆ ಮನೆ ಬಿದ್ದೋಗಿದ್ದರೂ ಒಂದು ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ನಮಗೆ ಸುರಕ್ಷಿತವಾದ ಸ್ಥಳದಲ್ಲಿ ಸೈಟುಕೊಟ್ಟರೆ ನಾವು ನೆಮ್ಮದಿಯ ಬದುಕು ಕಟ್ಟಿಕೊಳ್ತೇವೆ ಎಂದು ಮನವಿ ಮಾಡಿದ್ದಾರೆ.
ಇವರ ಸಮಸ್ಯೆ ಬಗ್ಗೆ ಪಬ್ಲಿಕ್ ಟಿವಿ ಜಿಲ್ಲಾಧಿಕಾರಿಯವರನ್ನ ಕೇಳಿದ್ರೆ, ಇವರ್ಯಾರು ನದಿತಟದಲ್ಲಿ ಇಲ್ಲ. ಅವರೆಲ್ಲರೂ 94 ಸಿ ಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೇನು ಸಮಸ್ಯೆ ಇಲ್ಲ ಅಂತಾರೆ. ಹಾಗೇನಾದರೂ ಸಮಸ್ಯೆ ಇದ್ದರೆ ಒಮ್ಮೆ ಸ್ಥಳ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಜೀತಮುಕ್ತರಾಗಿ ನೆಮ್ಮದಿಯ ಬದುಕಿನ ಕನಸು ಕಂಡಿದ್ದ ಆದಿವಾಸಿ ಬುಡಕಟ್ಟು ಜನರ ಬದುಕು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ.