ಹುಬ್ಬಳ್ಳಿ: ಕಿಮ್ಸ್ ವೈದ್ಯರು ಮಾಡಿದ ಎಡವಟ್ಟು ಒಂದಲ್ಲ, ಎರಡಲ್ಲ… ಸದಾಕಾಲ ಸುದ್ದಿಯಲ್ಲಿರುವ ಇವರು ಇಂದು ಮಾಡಿದ ಎಡವಟ್ಟು ಕೇಳಿದ್ರೆ ನಿಮಗೆ ಅಚ್ಚರಿ ಆಗದೇ ಇರದು.
ಹೌದು. ಹಾವು ಕಡಿದು ಗಾಯಗೊಂಡಿದ್ದ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದ್ರೆ, ವೈದ್ಯರು ಚಿಕಿತ್ಸೆ ನೀಡದೇ ಕಚ್ಚಿದ ಹಾವನ್ನು ಹಿಡಿದು ತರುವಂತೆ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಸಿಗ್ಗಾಂ ತಾಲೂಕಿನ ಶಾಡಂಬಿ ಗ್ರಾಮದ ನಿವಾಸಿ ಅಕ್ಕಮ್ಮಾ ಕಾಳೆ (35) ಎಂಬವರು ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ನಾಗರ ಹಾವು ಕಚ್ಚಿದೆ. ಹೀಗಾಗಿ ಚಿಕಿತ್ಸೆಗಾಗಿ ಅಕ್ಕಮ್ಮಾ ಕಾಳೆ ಅವರನ್ನು ಸಂಬಂಧಿಕರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದ್ರೆ ಕಿಮ್ಸ್ ವೈದ್ಯರು ಚಿಕಿತ್ಸೆ ಕೊಡದೆ, ಕಚ್ಚಿದ ಹಾವನ್ನು ತರುವಂತೆ ಹೇಳಿದ್ದಾರೆ.
ವೈದ್ಯರು ಮಾತನ್ನು ಕೇಳಿ ಅಕ್ಕಮ್ಮಾ ಕಾಳೆ ಅವರ ಸಂಬಂಧಿಕರು ಧಾರವಾಡ ಜಿಲ್ಲೆಯ ಕುಂದಗೋಳಕ್ಕೆ ಹೋಗಿ ಅಲ್ಲಿ ಹಾವು ಹಿಡಿಯುವರನ್ನು ಕರೆತಂದು ಕಚ್ಚಿದ ನಾಗರ ಹಾವನ್ನು ಜೀವಂತವಾಗಿ ಹಿಡಿದು ಕಿಮ್ಸ್ಗೆ ತಂದಿದ್ದಾರೆ. ಇದನ್ನು ನೋಡಿದ ಕಿಮ್ಸ್ ವೈದ್ಯರು ಅಚ್ಚರಿಗೊಂಡಿದ್ದಾರೆ. ಆದ್ರೆ ಕಚ್ಚಿದ ಹಾವನ್ನು ಹಿಡಿದು ತರುವಂತೆ ಹೇಳಿದ ಆ ವೈದ್ಯನ ಬಗ್ಗೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.