ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳೆ ದಾಂಡೇಲಿಯಲ್ಲಿ ಬೆಳ್ಳಂಬೆಳಗ್ಗೆ ಶಾಲೆಗೆ ಹೋದ ವಿದ್ಯಾರ್ಥಿನಿ ಕಾಣೆಯಾಗಿದ್ದು, ನಂತರ ಸಂಬಂಧಿಕರ ಮನೆಗೆ ಬಂದ ಬಾಲಕಿ ತನ್ನನ್ನು ಅಪಹರಣ ಮಾಡಿ ವ್ಯಾನಿನಲ್ಲಿ ಹೊತ್ತೊಯ್ದಿದ್ದರು. ನಾನು ತಪ್ಪಿಸಿಕೊಂಡು ಬಂದೆ ಎಂದು ಹೇಳುತ್ತಿದ್ದಂತೆ ಈ ಸುದ್ದಿ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಅಲ್ಲದೇ ನಗರ ಭಾಗದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಗುಸು-ಗುಸು ಹರಿದಾಡಿತ್ತು.
ನಂತರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ದಾಂಡೇಲಿ ಪೊಲೀಸರು ಕೊನೆಗೂ ಬೇಧಿಸುವಲ್ಲಿ ಯಶಸ್ವಿಯಾಗಿದ್ದು ಬಾಲಕಿ ಹೇಳಿದ ಕಥೆ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಇದನ್ನೂ ಓದಿ: ಮೋದಿ ಅತ್ಯಾಚಾರಿಗಳ ಪರವಾಗಿದ್ದಾರೆ – ರಾಹುಲ್ ಗಾಂಧಿ ಕಿಡಿ
ಬಾಲಕಿ ಹೇಳಿದ್ದೇನು? ನಡೆದಿದ್ದು ಏನು?
ಪರೀಕ್ಷೆಗೆ ಭಯಪಟ್ಟ ವಿದ್ಯಾರ್ಥಿನಿಯೋರ್ವಳು ಅಪಹರಣದ ಕಥೆ ಹೆಣೆದು ಅದನ್ನು ಎಲ್ಲರಿಗೂ ನಂಬಿಸಿ ಬಿಟ್ಟಿದ್ದಾಳೆ. ಸೋಮವಾರದಿಂದ ದಸರಾ ರಜೆ ಮುಗಿದು ಸರ್ಕಾರಿ ಶಾಲೆಗಳು ಆರಂಭವಾಗಿವೆ. ಹಳೆದಾಂಡೇಲಿ ಭಾಗದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 12 ವರ್ಷದ ವಿದ್ಯಾರ್ಥಿನಿ ಶಾಲೆಗೆ ಹೋಗಲು ಮನಸ್ಸಿಲ್ಲದೆ, ಮುಂದೆ ನಡೆಯಲಿದ್ದ ಪರೀಕ್ಷೆಗೆ ಹೆದರಿ ಅಪಹರಣದ ಕಥೆಯನ್ನೇ ಕಟ್ಟಿ ಒಂದಿಷ್ಟು ಕಾಲ ಅವಾಂತರ ಸೃಷ್ಟಿಸಿದ್ದಾಳೆ.
ಮನೆಯಿಂದ ಶಾಲಾ ಸಮವಸ್ತ್ರ ಧರಿಸಿ ಬಂದ ಈ ವಿದ್ಯಾರ್ಥಿನಿ ನೇರವಾಗಿ ಶಾಲೆಗೆ ಹೋಗದೇ ಕಿತ್ತೂರು ಚನ್ನಮ್ಮ ರಸ್ತೆಯವರೆಗೂ ಹೋಗಿ ಅಲ್ಲೇ ಪಕ್ಕದಲ್ಲೇ ಇರುವ ಮಿರಾಶಿ ಗಲ್ಲಿಯ ತನ್ನ ಅತ್ತೆಯ ಮನೆ ಸೇರಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಆ ವಿದ್ಯಾರ್ಥಿನಿಯ ಅತ್ತೆಯ ಮನೆಯವರು ವಿಚಾರಿಸಿದಾಗ ತನ್ನನ್ನು ಮಾರುತಿ ವ್ಯಾನ್ನಲ್ಲಿ ಬಂದ ಯಾರೋ ಇಬ್ಬರು ಕಿಡ್ನ್ಯಾಪ್ ಮಾಡಿದ್ದರು. ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ವಾಹನವನ್ನು ನಿಲ್ಲಿಸಿದಾಗ ನಾನು ಅವರಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದು ಕಥೆಯನ್ನ ಕಟ್ಟಿದ್ದಾಳೆ.
ನಂತರ ಆ ವಿದ್ಯಾರ್ಥಿನಿಯ ಸಂಬಂಧಿಕರು ಈ ವಿಷಯವನ್ನು ಆಕೆಯ ಪಾಲಕರಿಗೆ ತಿಳಿಸಿದ್ದಾರೆ. ಪಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾಲಕರು ಸಹ ತಮ್ಮ ಮಗಳ ಮಾತನ್ನು ನಂಬಿ ಅಪಹರಣಕಾರರು ಬಂದು ನಮ್ಮ ಮಗಳನ್ನು ಅಪಹರಿಸಿದ್ದಾರೆ ಎಂದು ಹೇಳಿದ್ದಾರೆ. ಅಪಹರಣದ ಈ ಸುದ್ದಿ ಕಾಡ್ಗಿಚ್ಚಿನಂತೆ ನಗರದ ತುಂಬಾ ದಾಂಡೇಲಿಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಹರಡಿದೆ. ಇದನ್ನೂ ಓದಿ: ನನ್ನನ್ನು ಪ್ಯಾಕೇಜ್ ಸ್ಟಾರ್ ಅನ್ನೋರಿಗೆ ಚಪ್ಪಲೀಲಿ ಹೊಡೀತೀನಿ: ಪವನ್ ಕಲ್ಯಾಣ್ ಆನ್ ಫೈಯರ್
ನಂತರ ಪೊಲೀಸರು ಕೂಡ ಘಟನೆಯ ಬಗ್ಗೆ ತಲೆಕೆಡಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ. ವಿದ್ಯಾರ್ಥಿನಿಯನ್ನು ಕರೆದುಕೊಂಡು ನೀನು ಯಾವ ದಾರಿಯಲ್ಲಿ ಹೋಗುತ್ತಿದ್ದೆ. ಎಲ್ಲಿಂದ ಕಿಡ್ನಾಪ್ ಮಾಡಿದರು ಎಂಬ ಮಾಹಿತಿಯನ್ನು ಪಡೆಯುತ್ತಾ ಹೋಗಿದ್ದಾರೆ. ಅಲ್ಲಿಯೂ ಆ ವಿದ್ಯಾರ್ಥಿನಿ ಅಪಹರಣವಾಯಿತೆಂಬುದನ್ನೇ ನಂಬಿಸುತ್ತಾ ಹೋಗಿದ್ದಾಳೆ.
ಸತ್ಯ ಗೊತ್ತಾಗಿದ್ದು ಹೇಗೆ?
ಆಕೆ ಹೋದ ಹಾಗೂ ನಿಂತ ಮತ್ತು ತಪ್ಪಿಸಿಕೊಂಡ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ ಯಾವ ಸಿಸಿ ಕ್ಯಾಮೆರಾಗಳಲ್ಲಿಯೂ ಕೂಡ ಆಕೆಯ ಚಲನವಲನಗಳಾಗಲಿ ಅಥವಾ ಮಾರುತಿ ವ್ಯಾನ್ ಆಗಲಿ ನಿಂತ ಬಗ್ಗೆ ಸುಳಿವು ಸಿಗಲಿಲ್ಲ. ಮತ್ತೆ, ಮತ್ತೆ ವಿದ್ಯಾರ್ಥಿನಿಯನ್ನು ಪ್ರಶ್ನಿಸಿದಾಗ ಆಕೆ ಅದೇ ಕತೆ ಹೇಳುತ್ತಿದ್ದಳು. ಹೀಗಾಗಿ ಪೊಲೀಸರಿಗೆ ಈ ಬಗ್ಗೆ ಅನುಮಾನ ವ್ಯಕ್ತವಾಗಿದೆ. ನಂತರ ಆಕೆಯನ್ನು ಪುಸಲಾಯಿಸಿ ಕೇಳಿದಾಗ ಆಕೆ ನಡೆದಿರುವ ಸತ್ಯವನ್ನು ಒಪ್ಪಿಕೊಂಡು ಶಾಲೆ ಆರಂಭವಾದ ದಿನ ಹಾಗೂ ಪರೀಕ್ಷೆಗೆ ಅಂಜಿ ತಾನು ಈ ರೀತಿ ಮಾಡಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾಳೆ. ಕೊನೆಗೂ ಈ ಅಪಹರಣದ ರಹಸ್ಯ ಹೊರಬಂದಿದ್ದು, ನಗರದಲ್ಲಿ ಹಬ್ಬಿದ್ದ ಮಕ್ಕಳ ಕಳ್ಳರ ವದಂತಿಗೆ ತೆರೆ ಬಿದ್ದಿದೆ.