ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೆ ತಿಂಗಳು ಮಾತ್ರ ಬಾಕಿಯಿದೆ. ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನ ಅಂತಿಮಗೊಳಿಸಿ, ಪ್ರಚಾರಕ್ಕಾಗಿ ಸ್ಟಾರ್ ಕಲಾವಿದರನ್ನ ಕರೆತರುವ ಪ್ರಯತ್ನ ಮಾಡುತ್ತಿದೆ.
ಕಿಚ್ಚ ಸುದೀಪ್ ಈ ಬಾರಿ ಚುನಾವಣ ಅಖಾಡಕ್ಕೆ ಧುಮುಕುತ್ತಾರೆ, ರಾಜಕೀಯ ಪಕ್ಷದ ಪರ ಪ್ರಚಾರ ಮಾಡುತ್ತಾರೆ ಎನ್ನಲಾಗಿದೆ. ಈ ಮಧ್ಯೆ ಸುದೀಪ್ ಅವರು ಮತದಾನದ ಬಗ್ಗೆ ಅರಿವು ಮೂಡಿಸಲು ಜನರಲ್ಲಿ ಮನವಿ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಯುವಕರು ಹೆಚ್ಚು ಭಾಗವಹಿಸಬೇಕು. ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಸುದೀಪ್ ಯುವಕರಿಗೆ ಸಂದೇಶ ನೀಡಿದ್ದಾರೆ.
ಒಂದು ಉತ್ತಮ ಸಮಾಜ ಮತ್ತು ಉತ್ತಮ ದೇಶವನ್ನ ಕಟ್ಟಲು ಮತದಾನ ತುಂಬ ಅವಶ್ಯಕ. ಭ್ರಷ್ಟಚಾರವನ್ನು ತಡೆಗಟ್ಟಲು ಮತ್ತು ಒಬ್ಬ ಉತ್ತಮ ನಾಯಕನನ್ನ ಉಳಿಸಿಕೊಳ್ಳಲು ನಿಮ್ಮ ಮತ ಅತ್ಯಾಮೂಲ್ಯ. ಆದ್ದರಿಂದ ಮತದಾನ ಮಾಡಿ, ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಮಾಡಿಸಿಕೊಳ್ಳಿ. 18 ವರ್ಷ ಆಗುತ್ತಿದ್ದಂತೆ ನೀವು ಮತದಾನ ಮಾಡಲು ಅರ್ಹರು. ಯಾರ ಬಳಿ ವೋಟ್ ಐಡಿ ಕಾರ್ಡ್ ಇಲ್ಲವೋ, ಅವರ ಬೇಗ ವೋಟ್ ಐಡಿ ಕಾರ್ಡ್ ಮಾಡಿಸಿಕೊಳ್ಳಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾರನೇ ನಿರ್ಣಾಯಕ. ಈಗಾಗಲೇ ಮತದಾರರಾಗಿ ನೊಂದಾಯಿಸಿಕೊಳ್ಳಿ ಎಂದು ಬಿ-ಪ್ಯಾಕ್ ಎಂಬ ಸಂಸ್ಥೆ ಅಭಿಯಾನ ಆರಂಭಿಸಿದೆ. ಇದಕ್ಕೆ ಕಿಚ್ಚ ಸುದೀಪ್ ಸಹಕರಿಸಿದ್ದು, ಯುವಕರಿಗೆ ಸಂದೇಶ ನೀಡಿದ್ದಾರೆ.