ನವದೆಹಲಿ: ಕಾಂಗ್ರೆಸ್ ನಾಯಕ, ಉದ್ಯಮಿ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಷರೀಫ್ ಅವರ ಪತ್ನಿ ಶಾಜೀಯ ತರನ್ನುಮ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಂದು ದೆಹಲಿಯ ವಿದ್ಯುತ್ ಲೇನ್ ಕಚೇರಿಯಲ್ಲಿ ಇಡಿ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕೆಜಿಎಫ್ ಬಾಬು ಅವರನ್ನು ವಿಚಾರಣೆ ನಡೆಸಿದ್ದ ಅಧಿಕಾರಿಗಳು ಬಳಿಕ ಅವರ ಪತ್ನಿ ಶಾಜೀಯ ತರನ್ನುಮ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಸಮನ್ಸ್ ಹಿನ್ನೆಲೆ ಇಂದು ಅವರು ವಿಚಾರಣೆಗೆ ಹಾಜರಾಗಿದ್ದರು. ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಡ್ರಗ್ ಮಾಫಿಯಾಗೆ ಪ್ರೋತ್ಸಾಹ ಕೊಡುತ್ತಿದೆ: ರಾಹುಲ್ ಗಾಂಧಿ ವಾಗ್ದಾಳಿ
ಶಾಸಕ ಜಮೀರ್ ಅಹ್ಮದ್ ಜೊತೆಗೆ ಹಣಕಾಸು ವ್ಯವಹಾರ ಹೊಂದಿದ್ದ ಹಿನ್ನೆಲೆ ಕೆಜಿಎಫ್ ಬಾಬು ಕುಟುಂಬವನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಶಾಸಕ ಜಮೀರ್ ಅಹ್ಮದ್ಗೆ ಮನೆ ಕಟ್ಟಲು 2013ರಲ್ಲಿ ಡಿಡಿ ಮೂಲಕ 3.5 ಕೋಟಿ ಹಣವನ್ನು ಬಾಬು ನೀಡಿದ್ದರು. ಆದರೆ ಈವರೆಗೂ ಆ ಹಣವನ್ನು ಜಮೀರ್ ಅಹ್ಮದ್ ವಾಪಸ್ ನೀಡಿಲ್ಲ.
ಅಕ್ರಮ ಹಣ ವರ್ಗಾವಣೆ ಮತ್ತು ಐಎಂಎ ಕೇಸ್ ಬೆನ್ನು ಹತ್ತಿರುವ ಇಡಿ ಅಧಿಕಾರಿಗಳು ಜಮೀರ್ ಅಹ್ಮದ್ ಅಕೌಂಟ್ ಡಿಟೈಲ್ಸ್ ತೆಗೆದಿದ್ದು, ಇದರಲ್ಲಿ ಬಾಬು ಅವರು ಸಾಲ ನೀಡಿದ್ದು ಅದನ್ನು ವಾಪಸ್ ನೀಡದಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ವಿಚಾರಣೆಗೆ ಹಾಜರಾಗಿದ್ದ ಕೆಜಿಎಫ್ ಬಾಬು ನಾನು ಹಣ ನೀಡಿರುವುದು ಸತ್ಯ ಅದಕ್ಕೆ ದಾಖಲೆಗಳಿವೆ. ಅದು ಕಾನೂನು ಬದ್ಧ ಹಣ ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 36 ರೂ. ಇಳಿಕೆ
ಆದರೆ ಈ ಉತ್ತರದಿಂದ ತೃಪ್ತರಾಗದ ಅಧಿಕಾರಿಗಳು ಈಗ ಅವರ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಕೆಜಿಎಫ್ ಬಾಬು ಆಸ್ತಿ, ವ್ಯವಹಾರ ಸೇರಿದಂತೆ ಮತ್ತಷ್ಟು ಹಣಕಾಸು ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಜಮೀರ್ ಅಹ್ಮದ್ಗೆ ನೀಡಿದ ಸಾಲ ಕೆಜಿಎಫ್ ಬಾಬುಗೆ ಕಂಟಕವಾಗುವ ಸಾಧ್ಯತೆಗಳಿವೆ.