ಕನ್ನಡ ಚಿತ್ರಗಳ ಬಗ್ಗೆ ಪರಭಾಷೆಗಳಲ್ಲಿ ಎಂಥಾ ಅಸಡ್ಡೆಯಿತ್ತೋ ಆ ಜಾಗದಲ್ಲಿ ಬೆರಗೊಂದನ್ನು ಪ್ರತಿಷ್ಠಾಪಿಸುವಂಥಾ ಗೆಲುವು ಕಂಡಿರೋ ಚಿತ್ರ ಕೆಜಿಎಫ್. ಪ್ರಶಾಂತ್ ನೀಲ್ ಸಮರ್ಥ ಸಾರಥ್ಯ, ಪ್ರತಿಭಾವಂತ ತಂಡದ ಪರಿಶ್ರಮ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಅದ್ಭುತ ಅಭಿನಯವೂ ಸೇರಿದಂದಂತೆ ಒಂದಕ್ಕೊಂದು ಪೂರಕವಾಗಿದ್ದ ಕೆಜಿಎಫ್ ಬರೆದಿರೋದು ಸಾರ್ವಕಾಲಿಕ ದಾಖಲೆ. ಇಂಥಾ ಚಿತ್ರದ ಚಾಪ್ಟರ್ 2 ಶುರುವಾಗುತ್ತದೆಯೆಂದರೆ ಅದರತ್ತಲೂ ತೀವ್ರವಾದ ಕುತೂಹಲ ಹುಟ್ಟೋದು ಸಹಜವೇ.
ಕೆಜಿಎಫ್ ಚಾಪ್ಟರ್ 2 ಬಗ್ಗೆಯೂ ಕೂಡಾ ಕನ್ನಡವೂ ಸೇರಿದಂತೆ ನಾನಾ ಭಾಷಾ ಪ್ರೇಕ್ಷಕರಲ್ಲಿ ಅಂಥಾದ್ದೇ ಕುತೂಹಲ ಹುಟ್ಟಿಕೊಂಡಿದೆ. ಕೆಜಿಎಫ್ ಸೃಷ್ಟಿಸಿದ್ದ ಹವಾದ ಬಿಸಿಯಲ್ಲಿಯೇ ಇಡೀ ಟೀಮು ಎರಡನೇ ಭಾಗಕ್ಕಾಗಿ ಸಜ್ಜುಗೊಂಡಿತ್ತು. ಆ ಹೊತ್ತಿಗಾಗಲೇ ಚಿತ್ರೀಕರಣ ಯಾವಾಗ ಶುರುವಾಗುತ್ತದೆ ಎಂಬ ಕುತೂಹಲ ಕೂಡಾ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆದರೆ ಇತ್ತೀಚೆಗೆ ಆರಂಭವಾಗಲಿದ್ದ ಕ್ಷಣವೊಂದು ಕಾರಣಾಂತರಗಳಿಂದ ಮಿಸ್ ಆಗಿದ್ದರಿಂದ ಎಲ್ಲರಿಗೂ ನಿರಾಸೆಯಾಗಿದ್ದದ್ದು ನಿಜ. ಆದರೆ ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದೆ.
ಪ್ರಶಾಂತ್ ನೀಲ್ ಹಾಗೂ ಛಾಯಾಗ್ರಾಹಕ ಭುವನ್ ಗೌಡ ಬೆಂಗಳೂರಿನಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕವೇ ಒಂದಷ್ಟು ಸಮುಯದಿಂದ ಕೆಜಿಎಫ್ ಅಲೆಯಲ್ಲಿಯೇ ಮಿಂದೇಳುತ್ತಾ ಮಗಳು ಹುಟ್ಟಿದ ಸಂಭ್ರಮವನ್ನು ಆಸ್ವಾದಿಸಿದ್ದ ರಾಕಿ ಭಾಯ್ ಕೂಡಾ ಮತ್ತೆ ಚಿತ್ರೀಕರಣದ ಪೆವಿಲಿಯನ್ನಿಗೆ ಮರಳಿದ್ದಾರೆ. ಇಡೀ ತಂಡ ಕೆಲ ತಿಂಗಳಿಂದ ದೂರವಿದ್ದ ಸೆಟ್ಟಿನಲ್ಲಿ ಮತ್ತೆ ಮುಖಾಮುಖಿಯಾಗಿ ಸಂಭ್ರಮಿಸಿದೆ.
ಕಳೆದ ಬಾರಿ ಕಥೆಯೆಂಬುದೇ ಸಮಯ ಕೇಳುವಂತಿದ್ದುದರಿಂದ ಚಿತ್ರೀಕರಣ ಎರಡು ವರ್ಷಗಳ ಕಾಲ ಮುಂದುವರೆದಿತ್ತು. ಕೆಜಿಎಫ್ ನೋಡಿದ ಪ್ರತಿಯೊಬ್ಬರಿಗೂ ಅಷ್ಟು ಸಮಯ ತೆಗೆದುಕೊಂಡಿದ್ದದ್ದೇಕೆ ಎಂಬುದೂ ತಿಳಿದಿತ್ತು. ಆದರೆ ಈ ಬಾರಿ ಮಾತ್ರ ಪ್ರೇಕ್ಷಕರ ನಿರೀಕ್ಷೆಯನ್ನೂ ಮೀರಿ ಆದಷ್ಟು ಬೇಗನೆ ಚಿತ್ರೀಕರಣ ಮುಗಿಸಲು ಪ್ರಶಾಂತ್ ನೀಲ್ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ.
ಇದೀಗ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆಯಾದರೂ ಸದ್ಯದಲ್ಲಿಯೇ ಚಿತ್ರತಂಡ ಕರಾವಳಿಯ ಸುಂದರ ತಾಣಗಳತ್ತ ಹೊರಳಿಕೊಳ್ಳಲಿದೆ. ಇದೆಲ್ಲ ಏನೇ ಇದ್ದರೂ ಕೆಜಿಎಫ್ ಚಾಪ್ಟರ್ 2 ಆರಂಭವಾಗಿರೋದೇ ಪ್ರೇಕ್ಷಕರ ಪಾಲಿಗೆ ಶುಭ ಸಮಾಚಾರ.